Tuesday, 26 February 2019

ಸುಭಾಷಿತ  ೪೭


ಏಕೋಽಹಮಸಹಾಯೋಽಹಂ ಕೃಶೋಽಹಮಪರಿಚ್ಛದಃ।
ಸ್ವಪ್ನೇಽಪ್ಯೇವಂವಿಧಾ ಚಿಂತಾ ಮೃಗೇಂದ್ರಸ್ಯ ನ ಜಾಯತೇ।।


ಅನ್ವಯಾರ್ಥ:

 ಅಹಂ ಏಕಃ (ನಾನು ಏಕಾಕಿ)
 ಅಹಂ ಅಸಹಾಯಃ (ನಾನು ನಿಸ್ಸಹಾಯಕ)
 ಅಹಂ ಕೃಶಃ (ನಾನು ದರ್ಬಲ)
 ಅಹಂ ಅಪರಿಚ್ಛದಃ (ನಾನು ಅನಾಥ)
 ಏವಂವಿಧಾ (ಈ ರೀತಿಯ)
 ಚಿಂತಾ (ಯೋಚನೆಯು)
 ಮೃಗೇಂದ್ರಸ್ಯ (ಸಿಂಹಕ್ಕೆ)
 ಸ್ವಪ್ನೇ ಅಪಿ (ಕನಸಿನಲ್ಲೂ ಕೂಡಾ)
 ನ ಜಾಯತೇ (ಉಂಟಾಗುವುದಿಲ್ಲ)

ಭಾವಾರ್ಥ:

 ಸಮರ್ಥನು ಎನ್ನಿಸಿಕೊಳ್ಳಲು ಬಲ ಬುದ್ಧಿಮತ್ತೆ ಎಷ್ಟು ಮುಖ್ಯವೋ ಆತ್ಮವಿಶ್ವಾಸ ಅದಕ್ಕಿಂತಲೂ ಹೆಚ್ಚು ಮುಖ್ಯ. ನಾನು ಒಂಟಿ, ದುರ್ಬಲ , ಅನಾಥ, ಯಾರ ಸಹಾಯವೂ ಇಲ್ಲದೆ ಏನು ತಾನೇ ಮಾಡಬಲ್ಲೆ! ಎಂದು ಸಿಂಹವು ಎಂದೂ ಕೀಳರಿಮೆ ಹೊಂದುವುದಿಲ್ಲ. ಆನೆಗಳ ಶಾರೀರಿಕ ಬಲ ಸಿಂಹಕ್ಕಿಲ್ಲ. ಸಂಖ್ಯೆಯೂ ಆನೆಗಳಿಗಿಂತ ಎಷ್ಟೋ ಕಡಿಮೆ. ಆದರೇನು ಹಿಂಡು ಹಿಂಡೇ ಬಂದರೂ ಹೆದರದೆ ಮದಿಸಿದ ಆನೆಯ ಕುಂಭಸ್ಥಲವನ್ನೇ ಬಗೆಯುವ ಸಾಮರ್ಥ್ಯಕ್ಕೆ ಕಾರಣ ಅದರ ಆತ್ಮವಿಶ್ವಾಸ. ದ್ರೋಣ, ಕರ್ಣ, ಬೃಹದ್ಬಲ, ಭೂರಿಶ್ರವ, ಶಲ್ಯ, ಅಶ್ವತ್ಥಾಮ ದುರ್ಯೋಧನ ದುಶ್ಶಾಸನರೇ ಮೊದಲಾದ ಅತಿರಥ ಮಹಾರಥರು ಏಕಕಾಲದಲ್ಲಿ ಸುತ್ತುವರಿದು ಬಾಣಪ್ರಯೋಗ ಮಾಡುತ್ತಿದ್ದರೂ ಏಕಾಕಿ ಅಭಿಮನ್ಯು ಅವರನ್ನು ಎದುರಿಸಿ ಹೋರಾಡುತ್ತಿದ್ದರೆ ಬಿಲ್ಲು ಹಿಡಿದು ನೃತ್ಯ ಮಾಡುತ್ತಿರುವಂತೆ ತೋರುತ್ತಿತ್ತು. ಕಲ್ಪನೆಗೂ ನಿಲುಕದ ಆ ಮಹಾಸಾಹಸಕ್ಕೆ ಆತನ ಸಾಮರ್ಥ್ಯವಷ್ಟೇ ಕಾರಣವಲ್ಲ. ಆತ್ಮವಿಶ್ವಾಸವೆಂದರೆ ಅದು!! ಯುದ್ಧೋತ್ಸಾಹದಲ್ಲಿ ಮುನ್ನುಗ್ಗುವ ನನಗೆ ಐರಾವತವನ್ನೇರಿ ಸುರಗಣದೊಂದಿಗೆ ಬರುವ ಇಂದ್ರನೂ ಗಣನೆಗಿಲ್ಲ ಎಂಬ ದೃಢವಿಶ್ವಾಸವೇ ಅಷ್ಟು ಜನರನ್ನೆದುರಿಸುವ ಶಕ್ತಿ ನೀಡಿದೆ. ನಾನು ಒಂಟಿ ಅಸಹಾಯಕ ಎಂಬ ಭಾವನೆ ಕ್ಷಣಕಾಲವೂ ಬಾರದೆ ಮುನ್ನುಗ್ಗಿದರೆ ಸಿಂಹಬಲವು ತಾನಾಗಿಯೇ ಬರುವುದು.

Sunday, 24 February 2019

      ಸುಭಾಷಿತ - ೪೬
 



ಪಾತ್ರಾಪಾತ್ರವಿಶೇಷೋಽಸ್ತಿ ಧೇನುಪನ್ನಗಯೋರಿವ। ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್।।





ಅನ್ವಯಾರ್ಥ:



 ಧೇನುಪನ್ನಗಯೋಃ ಇವ(ಗೋವು ಹಾವುಗಳಂತೆ) ಪಾತ್ರಾಪಾತ್ರವಿಶೇಷಃ ಅಸ್ತಿ(ಸತ್ಪಾತ್ರರಿಗೂ ಅಪಾತ್ರರಿಗೂ ವ್ಯತ್ಯಾಸವಿದೆ)
 (ಧೇನ್ವಾ ಗೋವಿನಿಂದ)
 ತೃಣಾತ್ (ಹುಲ್ಲಿನಿಂದ)
 ದುಗ್ಧಂ (ಹಾಲು)
 ಉತ್ಪದ್ಯತೇ (ಉತ್ಪಾದಿಸಲ್ಪಡುತ್ತದೆ)
 (ಪನ್ನಗೇನ ಹಾವಿನಿಂದ)
 ದುಗ್ಧಾತ್(ಹಾಲಿನಿಂದ)
 ವಿಷಂ (ವಿಷವು)
 ಉತತ್ಪದ್ಯತೇ(ಉತ್ಪಾದಿಸಲ್ಪಡುತ್ತದೆ).




 ಭಾವಾರ್ಥ:



ದಾನವು ಪುಣ್ಯಕಾರ್ಯವೇ ಹೌದು. ಆದರೆ ಪಾತ್ರಾಪಾತ್ರವಿವೇಚನೆಯಿಲ್ಲದೆ ದಾನಮಾಡಿದರೆ ಅದು ಪಾಪಕಾರಣವೂ ಆದೀತು. ಹಸುವಿಗೆ ಹುಲ್ಲನ್ನೇ ಕೊಟ್ಟರೂ ಅದು ಅಮೃತಸಮಾನವಾದ ಹಾಲನ್ನೇ ಕೊಡುತ್ತದೆ. ವಿಷಪೂರಿತ ಹಾವಿಗೆ ಹಾಲನ್ನೇ ಕೊಟ್ಟರೂ ಅದರ ಬಾಯಲ್ಲಿ ವಿಷವೇ ತಾನೇ ಬರುವುದು? ಸಜ್ಜನರು ತಮಗೆ ಉಪಕಾರ ಮಾಡಿದವರನ್ನು ಎಂದೂ ಮರೆಯಲಾರರು ಮಾತ್ರವಲ್ಲ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡುವವರು. ಮರಕ್ಕೆ ಕಲ್ಲನ್ನು ಹೊಡೆದರೂ ಅದು ಕೊಡುವುದು ಹಣ್ಣನ್ನು. ಹೂವಿನ ಗಿಡವೊಂದು ತಿನ್ನುವುದು ದುರ್ವಾಸನೆಯ ಗೊಬ್ಬರವನ್ನಾದರೂ ಹೂವಿಗೆ ದುರ್ಗಂಧವಿದೆಯೇ? ದುಷ್ಟರಿಗೆ ದಾನವೋ ಸಹಾಯವೋ ನೀಡಿದರೆ ಅವರ ಅವರ ಪಾಪದಲ್ಲಿ ನಾವುಗಳೂ ಭಾಗಿಗಳಾಗುತ್ತೇವೆಯೇ ಹೊರತು ಯಾವ ಪುಣ್ಯವೂ ಇಲ್ಲ ಸುಖವೂ ಇಲ್ಲ. ದೇಹಿ ಎಂದವರಿಗೆ ನಾಸ್ತಿ ಎನ್ನಬಾರದು ನಿಜ ಆದರೆ ದೇಹಿ ಅಂದವನು ಎಂಥವನು ಎಂದು ನೋಡಬೇಡವೇ?
ಭಯೋತ್ಪಾದಕನೊಬ್ಬ  ಕೇಳಿದನೆಂದ ಆಶ್ರಯ ನೀಡಿದರೆ ಅದು ಪುಣ್ಯಕಾರ್ಯ ಹೇಗಾದೀತು?
ನೀಡುವವನು ಅದರ ಸದ್ವಿನಿಯೋಗ ಆಗುತ್ತದೆಯೇ ಎಂಬುದನ್ನು ಗಮನಿಸಬೇಕು. ಆಗಲೇ ಆ ದಾನಕ್ಕೊಂದು ಬೆಲೆ.

Friday, 22 February 2019

ಸುಭಾಷಿತ  ೪೫


 ಸುಶ್ರಾಂತೋಽಪಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ।   ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇಚ್ಚ ಗರ್ದಭಾತ್॥



ಅನ್ವಯ ಅರ್ಥ:

  ಸುಶ್ರಾಂತಃ ಅಪಿ(ಸಾಕಷ್ಟು ಆಯಾಸಗೊಂಡಿದ್ದರೂ)
  ಭಾರಂ (ಭಾರವನ್ನು)
  ವಹೇತ್ (ಹೊರುವುದು)
  ಶೀತೋಷ್ಣಂ ಚ (ಚಳಿಸೆಖೆಯನ್ನೂ)
  ನ ಪಶ್ಯತಿ (ಗಮನಿಸುವುದಿಲ್ಲ)
  ನಿತ್ಯಂ (ಯಾವಾಗಲೂ)
  ಸಂತುಷ್ಟಃ ಚರತಿ)
  (ಸಂತೋಷದಿಂದ ಸುತ್ತಾಡುತ್ತದೆ)
  ತ್ರೀಣಿ(ಈ ಮೂರು ಗುಣಗಳನ್ನು)
  ಗರ್ದಭಾತ್(ಕತ್ತೆಯಿಂದ)
  ಶಿಕ್ಷೇತ್(ಕಲಿಯಬೇಕು)




ಭಾವಾರ್ಥ:


 ಏನೂ ಅರಿಯದ ಮೂರ್ಖನನ್ನು ಕತ್ತೆಗೆ ಹೋಲಿಸುತ್ತಾರೆ. ಆದರೆ ಕಲಿಯುವ ಗುಣವಿದ್ದರೆ ಕತ್ತೆಯಿಂದಲೂ ಕಲಿಯುವುದಿದೆ.  ಎಷ್ಟು ಆಯಾಸಗೊಂಡಿದ್ದರೂ ಕತ್ತೆ ಭಾರವನ್ನು ಹೊರದೆ ಇರುವುದಿಲ್ಲ. ಬಿಸಿಲು ಮಳೆ ಚಳಿ ಗಾಳಿ ಏನೇ ಇದ್ದರೂ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಬೇಸರವೆಂಬುದು ಇಲ್ಲವೇ ಇಲ್ಲವೇನೋ! ಈ ಮೂರೂ ಗುಣಗಳು ಕತ್ತೆಯದೇ ಆದರೂ ಖಂಡಿತವಾಗಿಯೂ ಅನುಸರಣೀಯ.

   ಎಷ್ಟು ಆಯಾಸಗೊಂಡಿದ್ದರೂ ಒಪ್ಪಿಕೊಂಡ ಜವಾಬ್ದಾರಿಯಿಂದ ಹಿಂಜರಿಯುವಂತಿಲ್ಲ. ಎಂತಹ ಅಡೆತಡೆಗಳು ಬಂದರೂ ಅದನ್ನು ಪೂರೈಸುವ ದೃಢಚಿತ್ತವಿರಬೇಕು. ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಭೇದವಿಲ್ಲದೆ ಜವಾಬ್ದಾರಿಯನ್ನು ನಿಭಾಯಿಸಬೇಕು.  ಆಗ ಯಶಸ್ಸು ನಿಶ್ಚಯ.

Wednesday, 20 February 2019

ಸುಭಾಷಿತ ೪೪



 ಬಾಲಾದಪಿ ಗ್ರಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ।   ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಮ್॥



    ಅನ್ವಯ ಅರ್ಥ:


(ಯದಿ)ಯುಕ್ತಂ ಉಕ್ತಂ(ಸರಿಯಾದುದನ್ನು ಹೇಳಿದರೆ) ಬಾಲಾತ್ ಅಪಿ(ಮಗುವಿನಿಂದಲೇ ಆದರೂ)
 ಮನೀಷಿಭಿಃ (ಬುದ್ಧಿವಂತರಿಂದ)
 ಗ್ರಹೀತವ್ಯಂ (ಸ್ವೀಕರಿಸಲ್ಪಡಬೇಕು)
 ರವೇಃ(ಸೂರ್ಯನ)
 ಅವಿಷಯೇ(ಅನುಪಸ್ಥಿತಿಯಲ್ಲಿ/ಅಗೋಚರದಲ್ಲಿ )   ಪ್ರದೀಪಸ್ಯ(ದೀಪದ)
 ಕಿಂ ನ ಪ್ರಕಾಶನಮ್?(ಬೆಳಕೇ ಅಲ್ಲವೇ?)


ಭಾವಾರ್ಥ:


ಸತ್ಯಕ್ಕೆ ವಯಸ್ಸು ವಿದ್ವತ್ತು ಸಂಪತ್ತು ಜಾತಿ ಅಧಿಕಾರ ಯಾವುದೂ ತಡೆಯಾಗಲಾರದು. ಸರಿಯಾದ ಮಾತನ್ನು ಯಾರು ಹೇಳಿದರೂ ಅದು ಗ್ರಾಹ್ಯವೇ. ಬಾಲಕನೇ ಆಗಲೀ ವೃದ್ಧನೇ ಪಂಡಿತನಾಗಲೀ ಪಾಮರನಾಗಲೀ ಯುಕ್ತವು ಯುಕ್ತವು. ಆಪತ್ಕಾಲದಲ್ಲಿ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಬಾಲಕನ ಮಾತೆಂದು ತೆಗೆದುಹಾಕುವಂತಿಲ್ಲ. ಸದಾ ಕಾಲವೂ ಸೂರ್ಯನ ಬೆಳಕೇ ಆಗಬೇಕೆಂದರೆ ಸರಿಯೇ? ಸೂರ್ಯನ ಅನುಪಸ್ಥಿತಿಯಲ್ಲಿ ದೀಪವೂ ದಾರಿ ತೋರುತ್ತದೆ. ಯುಕ್ತಾಯುಕ್ತವಿವೇಚನೆ ಇದ್ದರೆ ಅಣುವಿನಿಂದ ಸ್ಥಾಣುವಿನ ವರೆಗೂ ಪ್ರತಿಯೊಂದೂ ಮಾರ್ಗದರ್ಶಕಗಳೇ.
    ಸುಭಾಷಿತ - ೪೩



ಮನೀಷಿಣಃ ಸಂತಿ ನ ತೇ ಹಿತೈಷಿಣಃ।
ಹಿತೈಷಿಣಃ ಸಂತಿ ನ ತೇ ಮನೀಷಿಣಃ।।
ಸುಹೃಚ್ಚ ವಿದ್ವಾನಪಿ ದುರ್ಲಭೋ ನೃಣಾಮ್।
ಯಥೌಷಧಂ ಸ್ವಾದು ಹಿತಂ ಚ ದುರ್ಲಭಮ್।।



ಅನ್ವಯಾರ್ಥ:

 ಮನೀಷಿಣಃ(ಬುದ್ಧಿವಂತರು)
 ಸಂತಿ(ಇದ್ದಾರೆ)
 (ತು ಆದರೆ)
 ತೇ (ಅವರು)
 ನ ಹಿತೈಷಿಣಃ (ಹಿತವನ್ನು ಬಯಸುವವರಲ್ಲ)   ಹಿತೈಷಿಣಃ(ಹಿತೈಷಿಗಳು)
 ಸಂತಿ(ಇದ್ದಾರೆ)
 (ಆದರೆ) ತೇ (ಅವರು)
 ನ ಮನೀಷಿಣಃ (ಬುದ್ಧಿವಂತರಲ್ಲ)
 ಯಥಾ (ಯಾವ ರೀತಿ)
 ಔಷಧಂ(ಔಷಧವು)
 ಸ್ವಾದು (ರುಚಿಕರವೂ)
 ಹಿತಂ ಚ (ಹಿತಕಾರಿಯೂ ಆದುದು) ದುರ್ಲಭಂ(ಸಿಗಲಾರದೋ)
 (ತಥಾ ಹಾಗೆಯೇ)
 ನೃಣಾಂ(ಜನರಿಗೆ)
 ಸುಹೃತ್ ಚ(ಒಳ್ಳೆಯ ಹೃದಯವಂತನೂ/ಗೆಳೆಯನೂ)
 ವಿದ್ವಾನ್ ಅಪಿ(ವಿದ್ವಾಂಸನೂ ಆದವನು) ದುರ್ಲಭಃ(ಸಿಗಲಾರನು)


   ಭಾವಾರ್ಥ:



 ತಿನ್ನಬೇಕು ಎನಿಸಿದ್ದು ಆರೋಗ್ಯಕ್ಕೆ ಹಿತವಲ್ಲ. ಹಿತವಾದ್ದು ತಿನ್ನಬೇಕು ಅನ್ನಿಸುವುದಿಲ್ಲ. ಔಷಧಿಯು ಎಂದಿಗೂ ರುಚಿಕರ ಆಗಿರದು. ಪ್ರಪಂಚದಲ್ಲಿ ಬುದ್ಧಿವಂತರು ಅನೇಕರು. ಆದರೆ ಲೋಕಹಿತಕ್ಕಾಗಿ ಬುದ್ಧಿ ಉಪಯೋಗಿಸುವವರು ಎಷ್ಟು ಮಂದಿ? ಹಣವಂತರು ಇನ್ನೂ ಒಂದಷ್ಟು ಸಂಗ್ರಹಿಸವವರೇ ಹೊರತು ಬಡವರ ಹಸಿವಿಗೆ ಸ್ಪಂದಿಸುವವರಲ್ಲ. ಬಡವನ ಹಸಿವು ಬಡವನಿಗಷ್ಟೇ ಅರಿವಾಗುವುದು. ಪಾಪ ಸಹಾಯ ಮಾಡುವ ಮನಸ್ಸು ಇದ್ದರೂ ಅವನು ಅಸಹಾಯಕ. ಎಷ್ಟೋ ಮಂದಿಗೆ ಚಿಕ್ಕಂದಿನಲ್ಲಿ ಕಷ್ಟದಲ್ಲಿ ಬೆಳೆವಾಗ ಹೊಟ್ಟೆಗಿಲ್ಲ. ಕಷ್ಟಪಟ್ಟು ದುಡಿದು ಸಾಕಷ್ಟು ಸಂಪಾದಿಸಿದಾಗ ಇದ್ದ ಬದ್ದ ಕಾಯಿಲೆಗಳು ಅಂಟಿಕೊಂಡು ಏನನ್ನೂ ತಿನ್ನುವ ಹಾಗಿಲ್ಲ. ಲೋಕವೇ ಹಾಗೇ ಎಲ್ಲಾ ವೈರುಧ್ಯಗಳ ಸಂತೆಯೇ. ಬುದ್ಧಿವಂತಿಕೆಯೂ ಇದ್ದು ಅದನ್ನು ಜಾರಿಗೊಳಿಸುವ ಸಂಪನ್ಮೂಲಗಳೂ ಇದ್ದು ಲೋಕಹಿತಕ್ಕಾಗಿ ಬಳಸುವವರು ಬಹಳ ವಿರಳ.
   ಸುಭಾಷಿತ - ೪೨


ಅಕ್ಷರಾಣಿ ಪರೀಕ್ಷ್ಯಂತಾಮಂಬರಾಡಂಬರೇಣ ಕಿಮ್।ಶಂಭುರಂಬರಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ।।
 (ಅಪ್ಪಯ್ಯ ದೀಕ್ಷಿತರು)


ಅನ್ವಯಾರ್ಥ:

 ಅಕ್ಷರಾಣಿ(ಅಕ್ಷರಗಳನ್ನು/ವಿದ್ಯೆಯನ್ನು)   ಪರೀಕ್ಷ್ಯಂತಾಮ್(ಪರೀಕ್ಷಿಸಿ ನೋಡಬೇಕು,)   ಅಂಬರಾಡಂಬರೇಣ ಕಿಮ್?(ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ?)
 ಶಂಭುಃ(ಶಿವನು)
 ಅಂಬರಹೀನಃ ಅಪಿ (ಬಟ್ಟೆ ಇಲ್ಲದ ದಿಗಂಬರನಾದರೂ)   ಸರ್ವಜ್ಞಃ ಇತಿ(ಸರ್ವಜ್ಞನೆದಂದು)
 ನ ಕಥ್ಯತೇ ಕಿಮ್(ಕರೆಯಲ್ಪಡುವುದಿಲ್ಲವೇ?)


ಭಾವಾರ್ಥ:

ಆಡಂಬರದ ವೇಷಭೂಷಣ, ಪಾಂಡಿತ್ಯ ಮೆರೆಯುವ ದೊಡ್ಡ ದೊಡ್ಡ ಪದಗಳನ್ನು ಬಳಸಿ ಮಾತನಾಡುವದು ಹೀಗೆ ಆಡಂಬರ ಮಾಡುವುದರಿಂದ ಏನು ಸುಖ? ಒಳಗಿನ ಪೊಳ್ಳುತನ ಒಂದಲ್ಲಾ ಒಂದು ದಿನ ಹೊರಬಿದ್ದೇ ಬೀಳುತ್ತದೆ. ನಿಜವಾದ ಪ್ರತಿಭೆಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ದಶದಿಕ್ಕುಗಳೇ ಬಟ್ಟೆಯಾಗಿರುವ ಶಿವನು ಸರ್ವಜ್ಞಮೂರ್ತಿಯೆನಿಸಿಲ್ಲವೇ?
       ಸುಭಾಷಿತ - ೪೧

 ಯಥಾಶಕ್ತಿ ಚಿಕೀರ್ಷಂತಿ ಯಥಾಶಕ್ತಿ ಚ ಕುರ್ವತೇ।
 ನ ಕಿಂಚಿದವಮನ್ಯಂತೇ ನರಾಃ ಪಂಡಿತಬುದ್ಧಯಃ॥
     (ವಿದುರ ನೀತಿ)


ಅನ್ವಯಾರ್ಥ:

 ಪಂಡಿತಬುದ್ಧಯಃ ನರಾಃ( ಪಾಂಡಿತ್ಯ ಉಳ್ಳ ಮನುಷ್ಯರು)
 ಯಥಾಶಕ್ತಿ(ಶಕ್ತಿಗನುಣವಾಗಿ)
 ಚಿಕೀರ್ಷಂತಿ(ಮಾಡಲು ಇಚ್ಛಿಸುತ್ತಾರೆ)
 ಚ(ಮತ್ತು)
 ಯಥಾಶಕ್ತಿ(ಶಕ್ತ್ಯನುಸಾರ)
 ಕುರ್ವತೇ(ಮಾಡುತ್ತಾರೆ)
 ಕಿಂಚಿತ್(ಸ್ವಲ್ಪವೂ)
 ನ ಅವಮನ್ಯಂತೇ(ಕೀಳಾಗಿ ತಿಳಿದುಕೊಳ್ಳುವುದಿಲ್ಲ)


ಭಾವಾರ್ಥ:

ಪಂಡಾ  ಜ್ಞಾನದಿಂದ ಬೆಳಗುವ ಬುದ್ಧಿ ಪಂಡಾ. ಪಂಡಾ ಇರುವವನು ಪಂಡಿತ. ನಿಜವಾದ ಪಂಡಿತ ತಾನೇನು ತಾನೆಷ್ಟು ಎಂಬುದನ್ನು ಅರಿತಿರುತ್ತಾನೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯೋಚನೆ ಯೋಜನೆಗಳಿರುತ್ತವೆ. ಅದೇ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ತನಗೆ ತಿಳಿಯದ ವಿಷಯದಲ್ಲಿ ಮಾತನಾಡುವುದು ಮಾಡಲಾಗದ ಕೆಲಸದಲ್ಲಿ ತೊಡಗುವುದು ಬುದ್ಧಿವಂತರ ಲಕ್ಷಣವಲ್ಲ. ಅರಿತಲ್ಲಿ ಜಂಬವಾಗಲೀ ಅರಿಯದಿದ್ದಲ್ಲಿ ಕೀಳರಿಮೆಯಾಗಲೀ ಎಂದಿಗೂ ಸಲ್ಲದು. ಹಾಗೆಯೇ ಇತರರನ್ನು ಕೀಳಾಗಿ ಕಾಣುವುದೂ ಕೂಡಾ ಪಂಡಿತರಿಗೆ ಎಂದೂ ಶೋಭಿಸದು. ಬಸವಣ್ಣ ಹೇಳಿದಂತೆ 'ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ' ಅವಿವೇಕಗಳು ಶಕ್ತಿ ಮೀರಿದ ಕಾರ್ಯದಲ್ಲಿ ತೊಡಗಿಸಿಕೊಂಡು ಕಷ್ಟಕ್ಕೊಳಗಾಗುತ್ತಾರೆ, ನನಗೆ ಬೇಕಾಗಿರಲಿಲ್ಲವಪ್ಪಾ ಎಂದು ಮನಸ್ಸಿನಲ್ಲಿ ಕೊರಗುತ್ತಾರೆ. ಮಾಡಿದ್ದಕ್ಕಿಂತ ಹೆಚ್ಚು ಹೇಳಿಕೊಳ್ಳುತ್ತಾರೆ.