Thursday 31 January 2019


ಸುಭಾಷಿತ ೧೧


ಈರ್ಷ್ಯೀ ಘೃಣೀ ತ್ವಸಂತೃಪ್ತಃ ಕ್ರೋಧನೋ ನಿತ್ಯ ಶಂಕಿತಃ।ಪರಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ॥

 ಅನ್ವಯ ಅರ್ಥ:

ಈರ್ಷ್ಯೀ(ಅಸೂಯೆಯಿಂದ ಕೂಡಿದವನು)
ಘೃಣೀ(ಜುಗುಪ್ಸೆ ಹೊಂದಿದವನು) ಅಸಂತೃಪ್ತಃ(ತೃಪ್ತಿಯಿಲ್ಲದವನು)
 ಕ್ರೋಧನಃ(ಕೋಪಿಷ್ಠನು)
ನಿತ್ಯಶಂಕಿತಃ(ಸದಾ ಸಂಶಯದಿಂದ ಕೂಡಿದವನು)
ಚ(ಮತ್ತು)
ಪರಭಾಗ್ಯೋಪಜೀವೀ(ಬೇರೆಯವರ ಸಂಪತ್ತಿನಲ್ಲಿ ಬದುಕುವವನು)
ಏತೇ ಷಟ್(ಈ ಆರು ಮಂದಿ)
ದುಃಖಭಾಗಿನಃ(ದುಃಖ ಹೊಂದುವವರು).


 ಭಾವಾರ್ಥ:

ಇತರರ ಬಗ್ಗೆ ಅಸೂಯೆ ಇದ್ದರೆ ತನ್ನಲ್ಲಿ ಎಷ್ಟು ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಇತರರ ಸುಖವನ್ನು ಕಂಡು ಕರುಬುವುದರಲ್ಲೇ ಜೀವನ ಕಳೆದು ಹೋಗುತ್ತದೆ. ಜುಗುಪ್ಸೆ ಹೊಂದಿದವನಿಗೆ ಮುಂದೆಲ್ಲ ಕತ್ತಲಾಗಿಯೇ ಕಾಣಿಸುವುದು. ಮುಂದೊಂದು ದಿನ ನನಗೂ ಸುಖವಿದೆ ಎಂಬ ಆಶಾಭಾವನೆಯಿಲ್ಲದೆ ಅವಿವೇಕದಿಂದ ಇರುವ ಸುಖವನ್ನೂ ಕಳೆದುಕೊಳ್ಳುವನು. ತೃಪ್ತಿ ಇದ್ದರೆ ಅದಕ್ಕಿಂತ ಮಿಗಿಲಾದ ಸುಖವಿಲ್ಲ. ಕಷ್ಟ ಸುಖಗಳು ಜೀವನದಲ್ಲಿ ಇರುವುದೇ. ಅದನ್ನು ಅರಿಯದೆ ಪುರಂದರದಾಸರು ಹೇಳಿದಂತೆ ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟಜೀವನದಾಸೆ ಇದ್ದರೆ ಇರುವ ಸುಖವನ್ನು ಅನುಭವಿಸುವುದು ಹೇಗೆ ಸಾಧ್ಯ? ಕೋಪವಿದ್ದವನಿಗೆ ವಿವೇಕವಿಲ್ಲ. ಹಿಂದು ಮುಂದು ಯೋಚಿಸದೆ ಮುನ್ನುಗ್ಗಿ ಕಷ್ಟಕ್ಕೊಳಗಾಗುತ್ತಾನೆ. ಕ್ಷಣಕಾಲ ತಾಳ್ಮೆವಹಿಸಿದರೆ ಮುಂದಿರುವ ಅನಾಹುತವನ್ನು ಖಂಡಿತಾ ತಪ್ಪಿಸಬಹುದು. ಸಂಶಯಾತ್ಮಾ ವಿನಶ್ಯತಿ. ಸಂಶಯವಿರುವುದು ಮನಸ್ಸಿನಲ್ಲಿ. ನಂಬಿಕೆಯಿರುವುದು ಅಂತರಾತ್ಮದಲ್ಲಿ. ಅಂತರಾತ್ಮದ ಬೆಳಕಿನಲ್ಲಿ ವಿವೇಚಿಸಿದರೆ ಸಂಶಯ ತಾನಾಗಿಯೇ ನಿವಾರಣೆಯಾಗುತ್ತದೆ. ಭಗವಂತನ ಅನುಗ್ರಹ ದೊರೆಯುತ್ತದೆ. ಅದು ಬಿಟ್ಟು ಎಲ್ಲವನ್ನೂ ಸಂಶಯದಿಂದಲೇ ಕಂಡರೆ ಸುಖವೆಲ್ಲಿಂದ ಸಿಗಬೇಕು? ತಾನು ಸಾಯಬೇಕು, ಸ್ವರ್ಗ ಪಡೆಯಬೇಕು. ಕಷ್ಟ ಪಟ್ಟು ಸಂಪಾದಿಸಿದರೆ ಅದರಿಂದಷ್ಟೇ ಸುಖ. ಇನ್ನೊಬ್ಬರ ಸೊತ್ತಿನಲ್ಲಿ ನಾವೆಷ್ಟು ದಿನ ಸುಖಪಡಬಹುದು? ಆದ್ದರಿಂದ ಈರ್ಷ್ಯೆ ಜುಗುಪ್ಸೆ ಉಳ್ಳವರು, ತೃಪ್ತಿಯಿಲ್ಲದವರು, ಕೋಪಿಗಳು, ಸಂಶಯಾತ್ಮರು,ಪರೋಪಜೀವಿಗಳು ಈ ಆರು ಮಂದಿ ನಿಶ್ಚಯವಾಗಿಯೂ ದುಃಖಭಾಜನರು.

Tuesday 29 January 2019

ಸುಭಾಷಿತ ೧೦

  ತೃಷ್ಣಾಂ ಛಿಂಧಿ ಭಜ ಕ್ಷಮಾಂ ತ್ಯಜ ಮದಂ ಪಾಪೇ ರತಿಂ ಮಾ ಕೃಥಾಃ। ಸತ್ಯಂ ಬ್ರೂಹ್ಯನುಯಾಹಿ ಸಾಧುಪದವೀಂ ಸೇವಸ್ವ ವಿದ್ವಜ್ಜನಮ್॥
ಮಾನ್ಯಾನ್ ಮಾನಯ ವಿದ್ವಿಷೋऽ– ಪ್ಯನುನಯಂ ಪ್ರಚ್ಛಾದಯ ಸ್ವಾನ್ ಗುಣಾನ್।
ಕೀರ್ತಿಂ ಪಾಲಯ ದುಃಖಿತೇ ಕುರುದಯಾಮೇತತ್ಸತಾಂ
ಚೇಷ್ಟಿತಮ್॥

ಅನ್ವಯ ಅರ್ಥ:

ತೃಷ್ಣಾಂ (ಆಸೆಯನ್ನು)
 ಛಿಂಧಿ (ತೊಡೆದುಹಾಕು)
 ಕ್ಷಮಾಂ ಭಜ (ಕ್ಷಮಾಗುಣವನ್ನು ಹೊಂದು)
ಮದಂ ತ್ಯಜ(ಮದವನ್ನು ಬಿಡು)
 ಪಾಪೇ (ಪಾಪದಲ್ಲಿ)
ರತಿಂ (ಪ್ರೀತಿಯನ್ನು)
ಮಾ ಕೃಥಾಃ(ಮಾಡಬೇಡ)
ಸತ್ಯಂ ಬ್ರೂಹಿ(ಸತ್ಯವನ್ನು ನುಡಿ)
 ಸಾಧುಪದವೀಂ(ಸಜ್ಜನರ ಹಾದಿಯನ್ನು) ಅನುಯಾಹಿ(ಅನುಸರಿಸು)
 ವಿದ್ವಜ್ಜನಂ(ವಿದ್ವಾಂಸರನ್ನು)
 ಸೇವಸ್ವ(ಸೇವೆಮಾಡು)
ಮಾನ್ಯಾನ್ (ಹಿರಿಯರನ್ನು/ ಗೌರವಿಸಬೇಕಾದವರನ್ನು) ಮಾನಯ(ಗೌರವಿಸು)

 ವಿದ್ವಿಷಃ ಅಪಿ(ದ್ವೇಷಿಸುವವರನ್ನೂ) ಅನುನಯ(ಅನುನಯಿಸು)
 ಸ್ವಾನ್ ಗುಣಾನ್(ತನ್ನಲ್ಲಿರುವ ಗುಣಗಳನ್ನು) ಪ್ರಚ್ಚಾದಯ(ಮುಚ್ಚಿಡು)
 ಕೀರ್ತಿಂ(ಕೀರ್ತಿಯನ್ನು)
 ಪಾಲಯ(ಉಳಿಸಿಕೊ)
 ದುಃಖಿತೇ(ದುಃಖಿಗಳಲ್ಲಿ)
ದಯಾಂ ಕುರು(ದಯೆತೋರು)
 ಏತತ್(ಇದು)
ಸತಾಂ(ಸಜ್ಜನರ)
ಚೇಷ್ಟಿತಮ್(ನಡತೆಯು).


ಭಾವಾರ್ಥ:

 ದೊಡ್ಡವರೆನಿಸಿಕೊಳ್ಳುವುದು ತೋರಿಕೆಯ ದೊಡ್ಡತನದಿಂದಲ್ಲ, ನಯವಿನಯದಿಂದ. ದೊಡ್ಡವರೆನಿಸಿಕೊಳ್ಳುವುದು ಭೋಗದಿಂದಲ್ಲ, ತ್ಯಾಗದಿಂದ. ತಾನು ತನಗೆ ತನ್ನದು ಎಂಬ ಲೋಭವನ್ನು ಬಿಟ್ಟು ನಾವು ನಮಗೆ ನಮ್ಮದು ಎಂದಾಗ ದೊಡ್ಡವರಾಗುತ್ತೇವೆ. ದಂಡಿಸುವ ಶಕ್ತಿಯಿದ್ದೂ ಮದದಿಂದ ಪ್ರತೀಕಾರ ಮಾಡದೆ ಕ್ಷಮಿಸುವುದು ದೊಡ್ಡವರ ಲಕ್ಷಣ. ಸಜ್ಜನರು ಎಷ್ಟೇ ಕಷ್ಟ ಬಂದರೂ ಸತ್ಯವನ್ನು ಬಿಡಲಾರರು ಪಾಪದಲ್ಲಿ ತೊಡಗಲಾರರು. ವಿನಯದಿಂದ ಸಾಧುಜನರನ್ನು ಅನುಸರಿಸುವರು. ತಾವು ಸ್ವತಃ ವಿದ್ವಾಂಸರಾದರೂ ಇತರ ಗರ್ವಪಡದೆ ವಿದ್ವಜ್ಜನರನ್ನೂ ಹಿರಿಯರನ್ನೂ ಗೌರವಿಸುವರು. ದ್ವೇಷಿಸುವವರನ್ನೂ ಪ್ರೀತಿಯಿಂದ ಗೆಲ್ಲುವರು. ತಮ್ಮ ಗುಣಸಾಮರ್ಥ್ಯಗಳನ್ನು ಹೊಗಳಿಕೊಳ್ಳದೆ ವಿನೀತರಾಗಿರುವರು. ದುಃಖಿಗಳ ದುಃಖದಲ್ಲಿಭಾಗಿಗಳಾಗಿ ಕಣ್ಣೊರಸುವರು. ಇದೇ ಸಜ್ಜನರ ದಾರಿ. ಫಲಗಳಿಂದ ಕೂಡಿದ ತರುಗಳು ಗರ್ವದಿಂದ ಬೀಗುವುದಿಲ್ಲ, ನಮ್ರತೆಯಿಂದ ಬಾಗುತ್ತವೆ. ಎತ್ತರದಲ್ಲಿರುವ ಮೋಡಗಳು ಹೊಸ ನೀರಿನಿಂದ ತುಂಬಿದಾಗ ವಿನಯವಾಗಿ ಭೂಮಿಗಿಳಿಯುತ್ತವೆ. ಹಾಗಿರುವಾಗ ಬುದ್ಧಿಯುಳ್ಳವರಾದ ನಾವು ಮಹಾಮನೀಷಿಗಳೆಂದು ಏಕೆ ಬೀಗಬೇಕು? ಸಜ್ಜನರ ದಾರಿಯಲ್ಲಿ ಸಾಗಿ ದೊಡ್ಡವರಾಗಲು ಪ್ರಯತ್ನಿಸೋಣ.
ಸುಭಾಷಿತ  ೯

ಗುಣಾನಾಮಂತರಂ ಪ್ರಾಯಃ ತಜ್ಞೋ ವೇತ್ತಿ ನ ಚಾಪರಃ।ಮಾಲತೀಮಲ್ಲಿಕಾಮೋದಂ ಘ್ರಾಣಂ ವೇತ್ತಿ ನ ಲೋಚನಮ್।।

ಅನ್ವಯ ಅರ್ಥ:

 ಗುಣಾನಾಂ ಅಂತರಂ (ಗುಣಗಳಲ್ಲಿನ ಭೇದವನ್ನು) ತಜ್ಞಃ(ನಿಪುಣನು)
ವೇತ್ತಿ (ಅರಿಯುತ್ತಾನೆ)
 ನ ಅಪರಃ(ವೇತ್ತಿ)(ಬೇರೆಯವ ಅರಿಯಲಾರ) ಮಾಲತೀಮಲ್ಲಿಕಾಮೋದಂ(ಜಾಜಿ ಮಲ್ಲಿಗೆಗಳ ಪರಿಮಳವನ್ನು) ಘ್ರಾಣಂ (ಮೂಗು)
 ವೇತ್ತಿ (ಅರಿಯುತ್ತದೆ)
 ಲೋಚನಮ್ (ಕಣ್ಣು) (ನ ವೇತ್ತಿ)(ಅರಿಯಲಾರದು).

ಭಾವಾರ್ಥ:

ಒಂದು ವಿಷಯದ ಗುಣಾವಗುಣಗಳನ್ನು ವಿಮರ್ಶಿಸಬೇಕಾದರೆ ಆ ವಿಷಯದ ಬಗ್ಗೆ ತಿಳಿವಳಿಕೆ ಇರಬೇಕು. ವಿಷಯ ಅರಿಯದೆ ಟೀಕಿಸುವುದು ಕೇವಲ ಮೂರ್ಖತನ. ಮಲ್ಲಿಗೆಯ ಜಾಜಿಯ ಸೌಂದರ್ಯವನ್ನು ಕಣ್ಣು ನೋಡಬಹುದೇ ಹೊರತು ಅದರ ಗಂಧದ ಆಸ್ವಾದನೆ ಆ ಕಣ್ಣಿಗೆ ಸಾಧ್ಯವಿಲ್ಲ. ಒಳ್ಳೆಯ ಸಂಗೀತವನ್ನು ಎಲ್ಲರೂ ಕೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರಿತು ಆನಂದಿಸಬೇಕಾದರೆ ಸಂಗೀತದ ಜ್ಞಾನ ಬೇಕೇ ಬೇಕು. ಕಾವ್ಯದ ಜ್ಞಾನವಿಲ್ಲವನಿಗೆ ಕಾಳಿದಾಸನ ಕಾವ್ಯವೂ ರಸಹೀನವಾಗಿ ಕಾಣಿಸುತ್ತದೆ. ಭಗವಂತನ ಕಲ್ಪನೆಯೇ ಇಲ್ಲದ ಮೂರ್ಖನಿಗೆ ಭಗವದ್ಗೀತೆಯಲ್ಲೂ ಹುಳುಕೇ ಕಾಣಿಸುವುದಲ್ಲದೆ ಅದರ ಗುರುತ್ವದ ಅರಿವೇ ಆಗಲಾರದು.

Saturday 19 January 2019



ಸುಭಾಷಿತ - ೮

ಸಹಜೋಽಪಿ ಗುಣಃ ಪುಂಸಾಂ
ಸಾಧುವಾದೇನ ವರ್ಧತೇ।
ಕಾಮಂ ಸುರಸಲೇಪೇನ
ಕಾಂತಿಂ ವಹತಿ ಕಾಂಚನಮ್॥

ಅನ್ವಯ ಅರ್ಥ:

ಪುಂಸಾಂ (ಜನರ)
ಸಹಜಃ ಅಪಿ ಗುಣಃ(ಸಹಜ ಗುಣಗಳೂ)
ಸಾಧುವಾದೇನ(ಪ್ರಶಂಸೆಯಿಂದ)
ವರ್ಧತೇ(ಹೆಚ್ಚುತ್ತದೆ)
ಕಾಮಂ(ಯಥೇಷ್ಟವಾಗಿ)
ಸುರಸಲೇಪೇನ(ಸುರಸಲೇಪದಿಂದ)
ಕಾಂಚನಂ (ಚಿನ್ನವು)
ಕಾಂತಿಂ ವಹತಿ(ಕಾಂತಿಹೊಂದುತ್ತದೆ)

ಭಾವಾರ್ಥ:

ಸುಪ್ತವಾಗಿದ್ದರೂ ಪ್ರತಿಭೆಯು ತಾನಾಗಿಯೇ ಬೆಳಗಬಲ್ಲುದಾದರೂ      ಸಾಕಷ್ಟು  ಪ್ರೋತ್ಸಾಹ ಸಿಕ್ಕಿದರೆ ಇನ್ನಷ್ಟೂ ಬೆಳಗುತ್ತದೆ.
ಚಿನ್ನಕ್ಕೆ ತನ್ನದೇ ಕಾಂತಿಯಿದ್ದರೂ ಪುಟವಿಟ್ಟು ಸಂಸ್ಕರಿಸುವುದರಿಂದ ಇನ್ನಷ್ಟೂ ಹೊಳಪು ಬರುತ್ತದೆ. ಹಾಗೆಯೇ ಬಿಟ್ಟರೆ ಅದೇ ಹೊಳಪು ತಾತ್ಕಾಲಿಕವಾಗಿಯಾದರೂ ಕುಂದಿಹೋಗುವುದು.
  ಸಹಜವಾಗಿಯೇ ಹಾಡುಗಾರನಾಗಿದ್ದರೂ ಆತನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ತರಬೇತಿ ನೀಡಿದರೆ ಆಗ ಸುಪ್ರಸಿದ್ಧ ಗಾಯಕನಾಗಬಹುದು.
   ನುರಿತ ಕಲಾವಿದನೇ ಆದರೂ ಹೆಚ್ಚು ಹೆಚ್ಚು  ಪ್ರೋತ್ಸಾಹದಿಂದ ಇನ್ನಷ್ಟೂ ಹೆಚ್ಚು  ಶ್ರೇಷ್ಠ ಕಲಾಕೃತಿಗಳು ಆತನಿಂದ ಹೊಮ್ಮಬಹುದು.

Friday 18 January 2019

 ಸುಭಾಷಿತ  ೭

ಯಥಾ ಖರಶ್ಚಂದನಭಾರವಾಹೀ ಭಾರಸ್ಯ ವೇತ್ತಾ ನ ತು ಚಂದನಸ್ಯ।
ಏವಂ ಹಿ ಶಾಸ್ತ್ರಾಣಿ ಬಹೂನ್ಯಧೀತ್ಯ ಚಾರ್ಥೇಷು ಮೂಢಾಃ ಖರವದ್ವಹಂತಿ॥


ಅನ್ವಯ ಅರ್ಥ:

 ಚಂದನಭಾರವಾಹೀ (ಚಂದನದ ಕಟ್ಟಿಗೆಗಳನ್ನು ಹೊತ್ತು ಸಾಗುವ)
ಖರಃ(ಕತ್ತೆಯು)
 ಯಥಾ(ಹೇಗೆ)
 ಭಾರಸ್ಯ ವೇತ್ತಾ(ಭಾರವನ್ನು ಮಾತ್ರ ತಿಳಿಯುವುದೋ)
 ನ ತು ಚಂದನಸುಗಂಧಸ್ಯ ವೇತ್ತಾ(ಚಂದನದ ಸುಗಂಧವನ್ನು ತಿಳಿಯಲಾರದೋ)
ಏವಂ ಹಿ (ಹಾಗೆಯೇ)
ಬಹೂನಿ ಶಾಸ್ತ್ರಾಣಿ( ಬಹಳ ಶಾಸ್ತ್ರಗಳನ್ನು)
 ಅಧೀತ್ಯ (ಓದಿಯೂ)
ಅರ್ಥೇಷು(ಅವುಗಳ ವಿಷಯದಲ್ಲಿ)
ಮೂಢಾಃ(ಮೂಢರಾಗಿ)
ಖರವತ್(ಕತ್ತೆಯಂತೆಯೇ)
 ಶಾಸ್ತ್ರಾಣಿ ವಹಂತಿ (ಶಾಸ್ತ್ರಗಳನ್ನು ಹೊರುತ್ತಾರೆ)

ಭಾವಾರ್ಥ:

 ಭಾರವನ್ನು ಹೊರುವ ಕತ್ತೆಗೆ ತಾನು ಹೊರುತ್ತಿರುವುದು ಕಟ್ಟಿಗೆಯಾದರೂ ಅಷ್ಟೇ ಚಂದನವಾದರೂ ಅಷ್ಟೇ. ಹೊರುವ ಭಾರವಷ್ಟೇ ಅದರ ಅರಿವಿಗೆ ಬಂದೀತು. ಕಸ್ತೂರಿಯನ್ನೇ ಹೊರುತ್ತಿದ್ದರೂ ಅದರ ಸುಗಂಧವಾಗಲೀ ಬೆಲೆಯಾಗಲೀ ಅದರ ಅರಿವಿಗೆ ಬರದು. ವೇದಶಾಸ್ತ್ರಗಳನ್ನು ಓದಿದರೆ ಸಾಲದು. ಅಧ್ಯಯನ ಮಾಡಿ ಅರ್ಥವರಿತು ಮಹತ್ವವನ್ನರಿತು ಆಚರಿಸಿದರೆ ಮಾತ್ರ ಓದಿದುದಕ್ಕೊಂದು ಬೆಲೆ. ಬಹಳ ಶಾಸ್ತ್ರಗಳನ್ನು ಓದಿ ಅವುಗಳ ಒಳಗನ್ನು ತಿಳಿಯದೆ, ಆಚರಣೆಗೆ ತಾರದೆ *ವಿದ್ಯಾ ವಿವಾದಾಯ* ಎಂಬಂತೆ ಕೇವಲ ವಾದಕ್ಕಾಗಿ, ಆಡುವುದಕ್ಕಾಗಿ ಮಾತ್ರ ಶಾಸ್ತ್ರಗಳನ್ನು ಉಪಯೋಗಿಸಿದರೆ ಆ ಪಂಡಿತರು ಕೇವಲ ತಲೆಯಲ್ಲಿ ಶಾಸ್ತ್ರಗಳ ಭಾರವನ್ನು ಹೊತ್ತ ಕತ್ತೆಯಂತೆಯೇ ಸರಿ.

Thursday 17 January 2019

ಸುಭಾಷಿತ  - ೬


ನಮಂತಿ ಫಲಿತಾ ವೃಕ್ಷಾಃ ನಮಂತಿ ಚ ಬುಧಾ ಜನಾಃ|
ಶುಷ್ಕಕಾಷ್ಟಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಹಿ॥

*ಅನ್ವಯ ಅರ್ಥ:*

ಫಲಿತಾಃ ವೃಕ್ಷಾಃ(ಹಣ್ಣುಗಳಿರುವ ಮರಗಳು)
 ನಮಂತಿ(ಬಾಗುತ್ತವೆ)
ಚ(ಮತ್ತು)
ಬುಧಾಃ ಜನಾಃ(ಜ್ಞಾನಿಗಳಾದ ಜನರು)
ನಮಂತಿ(ಬಾಗುತ್ತಾರೆ)
ಶುಷ್ಕಕಾಷ್ಠಾನಿ (ಒಣಗಿದ ಮರದ ಕೋಲುಗಳು)
ಚ (ಮತ್ತು)
ಮೂರ್ಖಾಃ(ಮೂರ್ಖರು)
ಭಿದ್ಯಂತೇ (ಮುರಿಯುತ್ತವೆ)
ನ ನಮಂತಿ(ಬಾಗುವುದಿಲ್ಲ).

*ಭಾವಾರ್ಥ:*

ನಯ ವಿನಯ ಸಜ್ಜನರ ಲಕ್ಷಣ. ಹಣ್ಣುಗಳು ಹೆಚ್ಚಿದ್ದಷ್ಟೂ ಮರಗಳು ಹೆಚ್ಚು ಹೆಚ್ಚು ಬಾಗುತ್ತವೆ. ಹಣ್ಣುಗಳಿವೆ ಎಂದು ಗರ್ವದಿಂದ ಅವು ಸೆಟೆಯುವುದಿಲ್ಲ.  ಜ್ಞಾನ ಹೆಚ್ಚಿದಂತೆ ಸಜ್ಜನರು ಹೆಚ್ಚು ಹೆಚ್ಚು ವಿನಯವಂತರಾಗುತ್ತಾರೆ.
ಉಪಯೋಗಲ್ಲದ, ಹೂ ಹಣ್ಣುಗಳಿಲ್ಲದ ಮರ ಮುರಿದೀತೇ ಹೊರತು ಎಂದೂ ಬಾಗುವುದಿಲ್ಲ.
ಮೂರ್ಖರು ಹಾಗೆಯೇ,
ನಯವಿನಯ ಅವರಲ್ಲಿಲ್ಲ. ಏನೂ ಅರಿಯದಿದ್ದರೂ ಜಂಭದಿಂದ ಬೀಗುತ್ತಾರೆ. ಎಂದಿಗೂ ಜ್ಞಾನಿಗಳ ಮುಂದೆ ಗುರುಹಿರಿಯರ ಮುಂದೆ ವಿನಯದಿಂದ ವರ್ತಿಸಲಾರರು.
ಸುಭಾಷಿತ -  ೫

ಕ್ಷಿಪ್ರಂ ವಿಜಾನಾತಿ ಚಿರಂ ಶೃಣೋತಿ।
ವಿಜ್ಞಾಯ ಚಾರ್ಥಂ ಭಜತೇ ನ ಕಾಮಾತ್॥
ನಾಸಂಪೃಷ್ಟೋ  ಹ್ಯುಪಯುಂಕ್ತೇ ಪರಾರ್ಥೇ।
ತತ್ಪ್ರಜ್ಞಾನಂ ಪ್ರಥಮಂ ಪಂಡಿತಸ್ಯ॥

ಅನ್ವಯ ಅರ್ಥ:

ಕ್ಷಿಪ್ರಂ (ಶೀಘ್ರವಾಗಿ)
ವಿಜಾನಾತಿ (ತಿಳಿದುಕೊಳ್ಳುತ್ತಾನೆ)
ಚಿರಂ(ದೀರ್ಘ ಕಾಲ)
ಶೃಣೋತಿ (ಕೇಳುತ್ತಾನೆ)
ವಿಜ್ಞಾಯ ಚ(ತಿಳಿದಿದ್ದರೂ)
ಕಾಮಾತ್(ಆಸೆಗೊಳಗಾಗಿ)
ಅರ್ಥಂ(ಲಾಭವನ್ನು)
ನ ಲಭತೇ (ಹೊಂದಬಯಸುವುದಿಲ್ಲ)
ಅಸಂಪೃಷ್ಟಃ(ಕೇಳದೆಯೇ)
ಪರಾರ್ಥೇ(ಅನ್ಯರ ವಿಷಯದಲ್ಲಿ)
ನ ಹಿ ಉಪಯುಂಕ್ತೇ (ತೊಡಗಿಸಿಕೊಳ್ಳುವುದಿಲ್ಲ)
ತತ್(ಅದು)
ಪಂಡಿತಸ್ಯ(ಜ್ಞಾನಿಯ)
ಪ್ರಜ್ಞಾನಮ್(ಬುದ್ಧಿಯು)

ಭಾವಾರ್ಥ:

ಜ್ಞಾನಿಯಾದವನು  ಯಾವುದೇ ವಿಷಯಗಳನ್ನು ಬಹಳ ಬೇಗನೆ ತಿಳಿದುಕೊಳ್ಳುತ್ತಾನೆ. ತಿಳಿದಿದ್ದರೂ ತಾನು ತಿಳಿದಿರುವುದೇ ಸರಿ ಎಂದುಕೊಳ್ಳುವುದಿಲ್ಲ.ಒಮ್ಮೆಲೇ ಕಾರ್ಯಪ್ರವೃತ್ತನಾಗುವುದಿಲ್ಲ.
 ಇತರರ ಸಲಹೆ ಸೂಚನೆಗಳನ್ನು ಗೌರವಿಸಿ  ಅವರ ಮಾತುಗಳನ್ನು ಸಹನೆಯಿಂದ ಸಂಪೂರ್ಣವಾಗಿ ಕೇಳುತ್ತಾನೆ. ಸಾಧಕ ಬಾಧಕಗಳನ್ನು ಚೆನ್ನಾಗಿ ವಿಮರ್ಶಿಸಿಕೊಳ್ಳುತ್ತಾನೆ.
 ಲಾಭವಿದೆಯೆಂದು ಅರಿತಿದ್ದರೂ ಪುರುಷಾರ್ಥಕ್ಕಾಗಿ ತೊಡಗುತ್ತಾನೆಯೇ ಹೊರತು ಸ್ವಾರ್ಥಕ್ಕಾಗಿ ಎಂದೂ ಕಾರ್ಯಪ್ರವೃತ್ತನಾಗುವದಿಲ್ಲ.
ಹಾಗೆಂದು ಇತರರು ಅಪೇಕ್ಷೆ ಪಡದೆ ಅವರ ವಿಷಯದಲ್ಲಿ ಎಂದಿಗೂ  ತಲೆಹಾಕುವದಿಲ್ಲ.
ತಿಳಿದಿದೆಯೆಂದು ವೃಥಾ ಕಾರ್ಯವೆಸಗಲಾರ.
 ಅಗತ್ಯವಿದ್ದಲ್ಲಿ ಉಪಕರಿಸಲು ಹಿಂಜರಿಯಲಾರ.
ಇದು ಪಂಡಿತರ ಲಕ್ಷಣ.
ಸುಭಾಷಿತ  - ೪

ಉಚಿತಂ ವ್ಯಯಶೀಲಸ್ಯ ಕೃಶತ್ವಮಪಿ ಶೋಭತೇ।
ದ್ವಿತೀಯಶ್ಚಂದ್ರಮಾ ವಂದ್ಯೋ ನ ವಂದ್ಯಃ ಪೂರ್ಣಚಂದ್ರಮಾ।।

ಪದಚ್ಛೇದ:
ಉಚಿತಂ ವ್ಯಯಶೀಲಸ್ಯ ಕೃಶತ್ವಂ ಅಪಿ ಶೋಭತೇ।
ದ್ವಿತೀಯಃ ಚಂದ್ರಮಾ ವಂದ್ಯಃ ನ ವಂದ್ಯಃ ಪೂರ್ಣಚಂದ್ರಮಾ॥

ಅನ್ವಯ ಅರ್ಥ:
ಉಚಿತಂ(ಯುಕ್ತವಾಗಿ) ವ್ಯಯಶೀಲಸ್ಯ(ಖರ್ಚು ಮಾಡುವವನಿಗೆ)
 ಕೃಶತ್ವಂ ಅಪಿ(ಕ್ಷೀಣತ್ವವೂ)
ಶೋಭತೇ(ಶೋಭಿಸುತ್ತದೆ)
ದ್ವಿತೀಯಃ(ಬಿದಿಗೆಯ)
ಚಂದ್ರಮಾ(ಚಂದ್ರನು)
ವಂದ್ಯಃ(ಪೂಜಿಸಲ್ಪಡುತ್ತಾನೆ) ।
ಪೂರ್ಣಚಂದ್ರಮಾ(ಪೂರ್ಣಚಂದ್ರನು) ನ ವಂದ್ಯಃ(ಪೂಜಿಸಲ್ಪಡುವುದಿಲ್ಲ) ।।


ಭಾವಾರ್ಥ:

 ಸತ್ಪಾತ್ರರಿಗೆ ಧಾರಾಳವಾಗಿ ದಾನ ಮಾಡಿ ಒಬ್ಬನು ಆರ್ಥಿಕವಾಗಿ ಸೋತರೂ ಸಮಾಜದಲ್ಲಿ ಅವನಿಗೆ ಮನ್ನಣೆ ಇದೆ.
ಯಾರಿಗೂ ಕೊಡದೆ ಸದಾ ಸಂಗ್ರಹ ಮಾಡಿ ಶ್ರೀಮಂತನಾಗಿದ್ದರೆ ಎದುರಲ್ಲಿ ಎಲ್ಲರೂ ಅವನನ್ನು ಹೊಗಳುವರು ಆದರೆ ಅಂತರಂಗಲ್ಲಿ ಅವನನ್ನು  ಪೂಜಿಸಲಾರರು.
 ಬೆಳಕು ಚೆಲ್ಲಿ ಚೆಲ್ಲಿ ದಿನಕ್ಕೊಂದು ಕಲೆಯಷ್ಟು  ಕ್ಷೀಣಿಸಿ  ಕೇವಲ ಗೆರೆಯ ಹಾಗಿರುವ ಬಿದಿಗೆ ಚಂದ್ರನನ್ನು  ಎಲ್ಲರೂ ದೇವರ ಹಣೆಲ್ಲಿಯೋ ಶಿಖೆಯಲ್ಲಿಯೋ  ಇಟ್ಟು ಪೂಜಿಸುವರು.

ಅದೇ ಪೂರ್ಣಚಂದ್ರನ ಸೌಂದರ್ಯವನ್ನು ನೋಡಿ ಹೊಗಳಬಹುದೇ ಹೊರತು ಯಾರೂ  ಪೂಜಿಸಲಾರರು.

Wednesday 16 January 2019

ಸುಭಾಷಿತ  -೩


ಯಥಾ ಹ್ಯೇಕೇನ ಚಕ್ರೇಣ  ನ ರಥಸ್ಯ ಗತಿರ್ಭವತಿ।
ತಥೈವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ।।

ಪದಚ್ಛೇದ:
ಯಥಾ ಹಿ ಏಕೇನ ಚಕ್ರೇಣ ನ ರಥಸ್ಯ ಗತಿಃ ಭವತಿ।
ತಥಾ ಏವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ ।।

ಅನ್ವಯ ಅರ್ಥ:

ಯಥಾ(ಹೇಗೆ)
 ಏಕೇನ ಚಕ್ರೇಣ(ಒಂದೇ ಚಕ್ರದಿಂದ)
 ರಥಸ್ಯ ಗತಿಃ(ರಥದ ಚಲನೆಯು)
ನ ಹಿ ಭವತಿ(ಆಗಗುವುದಿಲ್ಲವೋ)
ತಥಾ ಏವ(ಹಾಗೆಯೇ)
 ದೈವಂ ವಿನಾ(ದೈವವಿಲ್ಲದೆ)
 (ಕೇವಲಂ) ಪುರುಷಯತ್ನೇನ (ಕೇವಲ ಪುರುಷಪ್ರಯತ್ನದಿಂದ)
 (ಕಾರ್ಯಂ)  ನ ಸಿಧ್ಯತಿ(ಕಾರ್ಯಸಿದ್ಧಿ ಆಗಲಾರದು) ।।

ಭಾವಾರ್ಥ:

ರಥ ನಡೆಯಬೇಕಾದರೆ ಎರಡು ಚಕ್ರಗಳು ಬೇಕೇ ಬೇಕು. ಎರಡೂ ಚಕ್ರಗಳೂ ಅನುನಯಿಸಿ ಹೋಗಬೇಕು.
ಸಂಕಲ್ಪಿತ ಕಾರ್ಯಸಿದ್ಧಿಗೆ ಒಂದು ಚಕ್ರ ಪುರುಷಪ್ರಯತ್ನವಾದರೆ ಇನ್ನೊಂದು ಚಕ್ರ ದೈವಸಹಾಯ. ಯಾವ ನಾಸ್ತಿಕನಾದರೂ ಅವನು ಕೇಳಿದರೂ ಕೇಳದ್ದರೂ ದೈವಸಹಾಯ ಇಲ್ಲದಿದ್ದರೆ ಕಾರ್ಯಪೂರ್ತಿ ಆಗಲಾರದು.
ಹಾಗೇ
ಎಷ್ಟೇ ದೊಡ್ಡ ಭಕ್ತನಾದರೂ ಏನೂ ಪ್ರಯತ್ನ ಮಾಡದೇ ದೈವದಿಂದಲೇ ಎಲ್ಲಾ ಕೆಲಸ ಆಗಬೇಕು ಎಂದರೆ ಅದು ಮೂರ್ಖತನ.
ಮಾ ತೇ ಸಂಗೋಽಸ್ತ್ವಕರ್ಮಣಿ
ಕರ್ಮ ಮಾಡದೆ ಫಲ ಸಿಗಲುಲ  ಸಾಧ್ಯವಿಲ್ಲ  ಎನ್ನುತ್ತಾನೆ ಶ್ರೀಕೃಷ್ಣ.

ಕಾಡಿನ ರಾಜನೇ ಆದರೂ ಸಿಂಹ ಆಹಾರಕ್ಕಾಗಿ ಬೇಟೆಯಾಡಲೇ ಬೇಕು. ಸುಮ್ಮನೆ ಬಾಯಗಲಿಸಿ ಕುಳಿತರೆ ಅದರ ಬಾಯಿಗೆ ಪ್ರಾಣಿಗಳು ತಾವಾಗಿಯೇ ಬಂದು ಬೀಳಲಾರವು.
ಪುರುಷಪ್ರಯತ್ನ ಬೇಕೇ  ಬೇಕು.
ಅದಕ್ಕೆ ದೈವಸಹಾಯವೂ ಬೇಕು ಆಗಲೇ ಕಾರ್ಯಕ್ಕೆ ಜಯ.
ಸುಭಾಷಿತ - ೨

ಏಕ ಏವ ಪದಾರ್ಥಸ್ತು ತ್ರಿಧಾ ಭವತಿ ವೀಕ್ಷಿತಃ।
ಕುಣಪಃ ಕಾಮಿನೀ ಮಾಂಸಂ ಯೋಗಿಭಿಃ ಕಾಮಿಭಿ  ಶ್ವಭಿಃ।।

ಅನ್ವಯಾರ್ಥ:

ಏಕಃ ಏವ ಪದಾರ್ಥಃ ತು(ಒಂದೇ ವಸ್ತುವು)
(ತ್ರಿಭಿಃ) ವೀಕ್ಷಿತಃ(ಮೂವರಿಂದ ನೋಡಲ್ಪಟ್ಟಾಗ)
 ತ್ರಿಧಾ ಭವತಿ ।(ಮೂರು ವಿಧವಾಗುತ್ತದೆ)
(ಯಥಾ ಏಕಂ ಏವ ಶರೀರಂ)
(ಒಂದೇ ಶರೀರವು)
ಯೋಗಿಭಿಃ ಕುಣಪಃ (ಇತಿ)(ಯೋಗಿಗಳಿಂದ ಶವವೆಂದೂ)
ಕಾಮಿಭಿಃ ಕಾಮಿನೀ(ಇತಿ)(ಕಾಮುಕನಿಂದ ಕಾಮಿನಿಯೆಂದೂ)  ಶ್ವಭಿಃ(ನಾಯಿಗಳಿಂದ)
 ಮಾಂಸಂ(ಇತಿ)
( ಜ್ಞಾಯತೇ ತಿಳಿಯಲ್ಪಡುತ್ತದೆ)


ಭಾವಾರ್ಥ:


ಒಂದೇ ವಸ್ತುವನ್ನು  ಕಂಡಾಗ  ಹಲವು ಜನರ ಮನಸ್ಸಿನಲ್ಲಿ ಹಲವು ಭಾವಗಳು ಉದಿಸಬಹುದು

ಒಂದು ಸ್ತ್ರೀ ಶರೀರ ಕಂಡ ಯೋಗಿ
ಏತನ್ಮಾಂಸವಸಾದಿ ವಿಕಾರಮ್ ಅಯ್ಯೋ ಇದು ಕೇವಲ  ಚರ್ಮಲ್ಲಿ ಸುತ್ತಿದ ಮಾಂಸ ಮೂಳೆಗಳ ತಡಿಕೆ ಎಂದೂಕೊಳ್ಳುತ್ತಾನೆ

ಅದೇ ಶರೀರ ಒಬ್ಬ ಸಾಮಾನ್ಯ ಕಾಮಿಗೆ ಕಾಮೋದ್ರೇಕ ಮಾಡುವುದು

ಒಂದು ಮಾಂಸಾಹಾರಿ ಕಾಡುನಾಯಿಯಂಥ ಪ್ರಾಣಿಗೆ ರುಚಿಯಾದ ಆಹಾರ ಕಂಡು ಬಾಯಲ್ಲಿ ನೀರೂರಬಹುದು

ಒಬ್ಬ ಸೌಂದರ್ಯೋಪಕ ಕಲಾವಿದನಿಗೆ ಒಂದು ಕಲಾಕೃತಿಯ ಪ್ರೇರಣೆಯಾದೀತು.
 ಅವರವರ ಭಾವ, ಸಂಸ್ಕಾರಕ್ಕೆ ಅನುಗುಣವಾಗಿ ಬೇರೆ ಬೇರೆ ಅನುಭವ ಉಂಟಾಗುವುದು.

ರತ್ನಾಕರ ವರ್ಣಿ ಹೇಳುವಂತೆ  ಶಿಲೆಯ ಮೇಲಿರ್ಪ ಭೋಗಿಗಳುಂಟು ಮೊಲೆಯ ಮೇಲಿರ್ಪ ಯೋಗಿಗಳುಂಟು