Monday 25 March 2019

ಸುಭಾಷಿತ - ೬೨


ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಮ್।
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖಮೇಧತೇ।।
 (ಮನು ಸ್ಮೃತಿ)

ಅನ್ವಯ:

 ಯಃ ನರಃ ಅಧಾರ್ಮಿಕಃ ಯಸ್ಯ ಧನಂ ಅಪಿ ಅನೃತಂ ಯಃ ನಿತ್ಯಂ ಹಿಂಸಾರತಃ ಚ ಅಸೌ ಇಹ ಸುಖಂ ನ ಏಧತೇ।

ಭಾವಾರ್ಥ:

ಯಾವ ಮನುಷ್ಯನು ಅಧಾರ್ಮಿಕನಾಗಿರುವನೋ, ಮೋಸದಿಂದ ಧನಾರ್ಜನೆಯನ್ನು ಮಾಡುತ್ತಾನೋ, ನಿತ್ಯ ಪರಹಿಂಸೆಯಲ್ಲಿ ತೊಡಗಿರುತ್ತಾನೋ ಅವನೆಂದಿಗೂ ಈ ಲೋಕದಲ್ಲಿ ಸುಖವನ್ನು ಹೊಂದುವುದಿಲ್ಲ.

 ಹಣದಿಂದ ಸುಖದ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು,ಆದರೆ ಸುಖವನ್ನು ಕೊಳ್ಳಲಾಗದು. ಸುಖಕ್ಕಾಗಿ ಅಧರ್ಮಮಾರ್ಗದಿಂದಲೋ ಸುಳ್ಳು ಹೇಳಿಯೋ ಹಿಂಸೆಯ ಮೂಲಕವೋ ಹಣ ಸಂಪಾದಿಸಿದರೆ ಅದರಿಂದ ಸುಖವೆಂದೂ ಸಿಗುವಂತಿಲ್ಲ. ಇತರರ ಗೋರಿಯ ಮೇಲೆ ಸೌಧ ಕಟ್ಟಿದರೆ ಅದು ಅಲ್ಲಾಡುತ್ತಲೇ ಇರುತ್ತದೆ. ಯಾವಾಗ ಬೀಳುತ್ತೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ತಾನು ಹೇಳಿದ ಸುಳ್ಳು ಮಾಡಿದ ಮೋಸ ಹಿಂಸೆಗಳು ಅಂತರಂಗದಲ್ಲಿ ಚುಚ್ಚದೇ ಇರದು. ಚುಚ್ಚುತ್ತಿರುವ ಅಂತರಂಗದಲ್ಲಿ ಸುಖ ಹೇಗೆ ನೆಲೆಸೀತು? ಅಂತರಂಗಸುಖವನ್ನು ನೀಡುವ ಲಕ್ಷ್ಮಿಯು ಸತ್ಯ ಧರ್ಮ ನ್ಯಾಯವನ್ನು ಅನುಸರಿಸಿ ಬರುವವಳು. ಕೀರ್ತಿಯು ತ್ಯಾಗವನ್ನನುಸರಿಸಿ ಬರುತ್ತದೆ

Friday 22 March 2019

ಸುಭಾಷಿತ - ೬೧

ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ।ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್।।ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ।ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ।।



ಅನ್ವಯ: ನಭಸಃ ಪೂಷಾ ಭೂಷಾ
 ಕಮಲವನಸ್ಯ ಮಧುಕರಃ ಭೂಷಾ
 ವಚಸಃ ಸತ್ಯಂ ಭೂಷಾ
 ವರವಿಭವಸ್ಯ ವಿತರಣಮ್ ಭೂಷಾ
 ಸದಸಃ ಸೂಕ್ತಿಃ ಭೂಷಾ
 ಸಕಲಗುಣಾನಾಂ ಚ ವಿನಯಃ ಭೂಷಾ।


ಭಾವಾರ್ಥ:

 ದಿನವಿಡೀ ಆಕಾಶವು ಮೋಡದಿಂದ ಆವರಿಸಿ ಮಳೆ ಸುರಿಯುತ್ತಿದ್ದರೆ ಮನಸ್ಸಿಗೆ ಮುದವಿಲ್ಲ.
ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿಂ ಎನ್ನ ಮನಂ ಬೇಸತ್ತುದುಂ. ಏನಾನುಮೊಂದು ನಲ್ಗತೆಯಂ ಪೇಳ ಎನ್ನುತ್ತಾಳೆ ಮುದ್ದಣನ ಮನೋರಮೆ.
ಕತ್ತಲು ಹರಿದು ಆಕಾಶದಲ್ಲಿ ಸೂರ್ಯನು ಬೆಳಗುತ್ತಿದ್ದಂತೆ ಎಲ್ಲೆಡೆ ಲವಲವಿಕೆ ಹರಡಲಾರಂಭಿಸುತ್ತದೆ . ಆಕಾಶಕ್ಕೆ ಸೂರ್ಯನೇ ಭೂಷಣ ರವಿಯಾಕಾಶಕೆ ಭೂಷಣಂ ಅಲ್ಲವೇ!
 ಸರೋವರದಲ್ಲಿ ಅರಳಿದ ತಾವರೆಗಳಿಗೆ ದುಂಬಿಗಳ ನಿನಾದವೇ ಭೂಷಣ. ಬರಿಯು ಅಂದವು ಎಂದಿಗೂ ಶೋಭಿಸದು ನೋಡಿ ಆನಂದಿಸುವ ಮಂದಿ ಇದ್ದಾಗ ಆ ಅಂದವು ಸಾರ್ಥಕವಾಗುತ್ತದೆ. ಮಾತಿಗೆ ಸತ್ಯವೇ ಭೂಷಣ.  ಮಾತಿನಲ್ಲಿ ಸತ್ಯವಿರಬೇಕು ಮನಃಸಾಕ್ಷಿಯನ್ನು ಮೀರದ ನಡತೆಯಿರಬೇಕು. ಅದು ಆತ್ಮೋನ್ನತಿಯ ದಾರಿ.
ಸಂಪತ್ತಿಗೆ ವಿತರಣೆಯೇ ಭೂಷಣ. ಸಿರಿಸಂಪತ್ತು ಎಷ್ಟೇ ಇದ್ದರೂ ಕಟ್ಟಿಟ್ಟಾಗ ಅದಕ್ಕೆ ಬೆಲೆಯಿಲ್ಲ. ಹತ್ತು ಮಂದಿಗಾಗಿ ಅದನ್ನು ವಿನಿಯೋಗಿಸಿದಾಗ ಅವರ ಹರಕೆಯಿಂದ ಸಿಗುವ ಸಂತೋಷ ಜಿಪುಣನಿಗಿಲ್ಲ.
 ಕೈ ಶೋಭಿಸುವುದು ದಾನದಿಂದ, ಚಿನ್ನದ ಕಂಕಣದಿಂದಲ್ಲ. ಚಿನ್ನದ ಕಂಕಣ ತೊಡುವ ಬದಲು ಒಬ್ಬ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಆತನ ಬದುಕೂ ಸೊಗಸೀತು.
  ಮನಸ್ಸಿಗೆ ಮೈತ್ರಿಯೇ ಭೂಷಣ. ಸಂತೋಷವನ್ನು ಇತರರಿಗೆ ಹಂಚಿದಾಗ ಅದು ದ್ವಿಗುಣವಾಗುತ್ತದೆ. ದುಃಖದಿಂದ ಮನಸ್ಸಿನೊಳಗೇ ಕೊರಗುವ ಬದಲು ಆತ್ಮೀಯರಲ್ಲಿ ಹೇಳಿಕೊಂಡಾಗ ಶಮನವಾಗುತ್ತದೆ.
   ವಸಂತಕಾಲಕ್ಕೆ ಕಾಮನೇ ಭೂಷಣ. ಸಜ್ಜನರ ಸಭೆಗೆ ಸುಸಂಸ್ಕೃತ ಭಾಷಣವೇ ಭೂಷಣ. ಪರರ ದೂಷಣೆ ಮಾಡಲು ಸಭೆ ವೇದಿಕೆಯಲ್ಲ. ಹತ್ತು ಸಮಸ್ತರು ಸೇರಿದಲ್ಲಿ ಮಾತನಾಡುವಾಗ ಎಚ್ಚರವಿರಬೇಕು. ಒಳ್ಳೆಯ ವಿಚಾರಗಳ ಚಿಂತನ ಮಂಥನ ನಡೆದರೆ ಅದು ನಿಜವಾದ ಅರ್ಥದಲ್ಲಿ ಸಭೆ. ಸಂಸ್ಕೃತದಲ್ಲಿ ಸಭಿಕರು ಎಂದರೆ ಜೂಜಾಡುವವರು ಎಂಬ ಅರ್ಥವೂ ಇದೆ. ಪರನಿಂದೆ ಮಾಡುತ್ತಾ ಮೇಜು ಗುದ್ದಿ ಗದ್ದಲ ಕೋಲಾಹಲ ಮಾಡಿದರೆ ಅದು ಆ ಅರ್ಥದಲ್ಲಿ ಸಭೆಯಾದೀತು ಅಷ್ಟೇ. ವಿದ್ಯೆ ಸಂಪತ್ತು ಅಧಿಕಾರ ಏನೇ ಇದ್ದರೂ ಅಹಂಕಾರ ಇದ್ದರೆ ವಿನಯವಿಲ್ಲದಿದ್ದರೆ ಎಲ್ಲಾ ಬಣ್ಣ ಮಸಿ ನುಂಗಿದಂತೆಯೇ. ಎಲ್ಲಾ ಗುಣಗಳಿಗೂ ವಿನಯವೇ ಭೂಷಣ.
ಸುಭಾಷಿತ - ೬೦

ವರಂ ಮೌನಂ ಕಾ ರ್ಯಂ ನ ಚ ವಚನಮುಕ್ತಂ ಯದನೃತಂ।ವರಂ ಕ್ಲೈಬ್ಯಂ ಪುಂಸಾಂ ನ ಚ ಪರಕಲತ್ರಾಭಿಗಮನಂ।
ವರಂ ಪ್ರಾಣತ್ಯಾಗೋ ನ ಚ ಪಿಶುನವಾದೇಷ್ವಭಿರುಚಿಃ।
ವರಂ ಭಿಕ್ಷಾಶಿತ್ವಂ ನ ಚ ಪರಧನಾಸ್ವಾದನಸುಖಮ್।।


ಅನ್ವಯ:

 ಮೌನಂ ಕಾರ್ಯಂ ವರಮ್ ಯತ್ ಅನೃತಂ ವಚನಂ ಉಕ್ತಂ (ತತ್) ನ ವರಮ್। ಪುಂಸಾಂ ಕ್ಲೈಬ್ಯಂ ಚ ವರಂ ಪರಕಲತ್ರಾಭಿಗಮನಂ ನ ವರಮ್। ಪ್ರಾಣತ್ಯಾಗಃ ವರಂ ಪಿಶುನವಾದೇಷು ಅಭಿರುಚಿಃ ನ ವರಮ್। ಭಿಕ್ಷಾಶಿತ್ವಂ ವರಂ ಪರಧನಾಸ್ವಾದನಸುಖಂ ನ ವರಮ್।।

ಭಾವಾರ್ಥ:

ಸುಳ್ಳಾಡುವದಕ್ಕಿಂತ ಮೌನವಾಗಿರುವುದು ಲೇಸು. ಪರಸ್ತ್ರೀಸಂಗಕ್ಕಿಂತ ಷಂಡತನವೇ ಮೇಲು ಚಾಡಿ ಹೇಳುವುದು ಕೇಳುವುದಕ್ಕಿಂತ ಸಾವೇ ಮೇಲು. ಬೇರೆಯವರ ಸೊತ್ತಿನಲ್ಲಿ ಆಸೆ ಪಟ್ಟು ಸುಖಿಸುವದಕ್ಕಿಂತ ಭಿಕ್ಷೆ ಬೇಡಿ ಬದುಕುವುದು ಲೇಸು.

Thursday 21 March 2019

ಸುಭಾಷಿತ - ೫೯

ವರಂ ಸಖೇ ಸತ್ಪುರಷಾಪಮಾನಿತಃ ನ ನೀಚಸಂಸರ್ಗಗುಣೈರಲಂಕೃತಃ।
ವರಾಶ್ವಪಾದೇನ ಹತೋ ವಿರಾಜತೇ ನ ರಾಸಭಸ್ಯೋಪರಿ ಸಂಸ್ಥಿತೋ ನರಃ।


ಅನ್ವಯ:

ಸಖೇ! ಸತ್ಪುರುಷಾಪಮಾನಿತಃ ವರಮ್! ನೀಚಸಂಸರ್ಗಗುಣೈಃ ಅಲಂಕೃತಃ ಅಪಿ ನ ವರಮ್। ವರಾಶ್ವಪಾದೇನ ಹತಃ ಅಪಿ ವಿರಾಜತೇ। ರಾಸಭಸ್ಯ ಉಪರಿ ಸಂಸ್ಥಿತಃ ಅಪಿ ನ ವಿರಾಜತೇ।

ಭಾವಾರ್ಥ:

ನೀಚರಿಂದ ಸಿಗುವ ಸಂಮಾನಕ್ಕಿಂತ ಸತ್ಪುರುಷರಿಂದ ಅವಮಾನಿತನಾಗುವುದು ಲೇಸು. ಶ್ರೇಷ್ಠವಾದ ಕುದುರೆಯ ಕಾಲಿನಡಿ ಸಿಕ್ಕು ಸತ್ತರೂ ಆಗಬಹುದು. ಕತ್ತೆಯ ಮೇಲೇರಿ ಮೆರವಣಿಗೆ ಮಾತ್ರ ಬೇಡ.
 ಪೀನಾರಿ ಎಂಬುದೊಂದು ಮರ. ಅದರ ತಿರುಳಿಗೆ ಮಲದ ವಾಸನೆಯಿದೆ. ಅದರೊಂದಿಗೆ ಆಟವಾಡಿದರೂ ಮೈಯೆಲ್ಲಾ ವಾಸನೆಯೇ. ಶ್ರೀಗಂಧದೊಂದಿಗೆ ಗುದ್ದಾಡಿದರೂ ಪರಿಮಳವೇ ತಾನೇ! ಆದ್ದರಿಂದ ಪೀನಾರಿಯೊಂದಿಗೆ ಆಟವಾಡುವುದಕ್ಕಿಂತ ಶ್ರೀಗಂಧದೊಂದಿಗೆ ಜಗಳಾಡುವುದೇ ಲೇಸು. ಹಾಗೆಯೇ ದುರ್ಜನರ ಸಹವಾಸದ್ವಾರಾ ಕೋಟ್ಯಾನುಕೋಟಿ ಸಂಪಾದಿಸಿ ಮೆರೆದರೂ ಜನರು ಎಂದಿಗೂ ಆತನನ್ನು ಮನಸಾರೆ ಗೌರವಿಸಲಾರರು. ಮೈಬಗ್ಗಿಸಿ ದುಡಿದು ಸಂಪಾದಿಸುವವರು ನೆಮ್ಮದಿಯಿಂದ ಗೌರವದಿಂದ ಬದುಕಬಲ್ಲರು. ಸತ್ಪುರುಷರು ಎಂದಿಗೂ ಯಾರನ್ನೂ ವಿನಾಕಾರಣ ಅವಮಾಸಲಾರರು. ಅವಮಾನಿಸಿದರೂ ಅದರಲ್ಲೊಂದು ಸದುದ್ದೇಶವಿರುತ್ತದೆ. ಅದರ ಪರಿಣಾಮ ಒಳ್ಳೆಯದೇ ಆಗುವುದು. ವಸಿಷ್ಠರಿಂದ ಸೋಲಿಸಲ್ಪಟ್ಟ ಕೌಶಿಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಾದನು. ದುರ್ಯೋಧನನಿಂದ ಸಂಮಾನಿಸಲ್ಪಟ್ಟರೂ ಶಲ್ಯನು ತನ್ನ ಸೇನೆಯೊಂದಿಗೆ ನಾಶವಾದನು. ದುರ್ಜನರೊಡನೆ ಮೈತ್ರಿಗಿಂತ ಸಜ್ಜನರೊಡನೆ ಜಗಳ ಲೇಸು.
ಸುಭಾಷಿತ - ೫೮

ವೃಷ್ಟಿಭಿಃ ಪೂರಿತಾ ಗ್ರಾಮ್ಯಾ ನೂನಂ ಕ್ಷುದ್ರಾಃ ಸರೋವರಾಃ। ತಟಂ ಭಿತ್ವಾ ಪ್ರಯಾಂತೀಹ ಧನಂ ಪ್ರಾಪ್ತಃ ಖಲೋ ಯಥಾ।

ಅನ್ವಯ:

ವೃಷ್ಟಿಭಿಃ (ಮಳೆಯಿಂದ)
 ಪೂರಿತಾಃ(ತುಂಬಿದ)
 ಗ್ರಾಮ್ಯಾಃ ಸರೋವರಾಃ(ಊರಿನ ಸರೋವರಗಳು)
  ನೂನಂ ಕ್ಷುದ್ರಾಃ(ಖಂಡಿತವಾಗಿಯೂ ಅಲ್ಪ ಗುಣದವು)
 (ತೇ) ಧನಂ ಪ್ರಾಪ್ಯ ಖಲಃ ಯಥಾ (ತಥಾ)(ಸ್ವಲ್ಪ ದಿನದಿಂದ ಕೊಬ್ಬಿ ಹಾರಾಡುವ ದುಷ್ಟರಂತೆ)
ತಟಂ ಭಿತ್ವಾ ಪ್ರಯಾಂತಿ(ಕಟ್ಟೆಯೊಡೆದು ಹರಿಯುತ್ತವೆ)


ಭಾವಾರ್ಥ:

 ಐಶ್ವರ್ಯ ಬಂದಾಗ ಹಾರಾಡುವ ದುರ್ಜನರಂತೆ ಮಳೆ ಬಂದಾಗ ಕಟ್ಟೆಯೊಡೆದು ಹರಿವ ಕೆರೆ ಸರೋವರಗಳು ತೀರಾ ಕ್ಷುದ್ರ. ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದಾನು ಎಂಬ ಗಾದೆಯಿದೆ. ಸಂಪತ್ತು ತಾಕತ್ತು ಇಧ್ದರೆ ಸಾಲದು. ಅದರ ವಿನಿಯೋಗದ ಅರಿವಿರಬೇಕು. ಎಲ್ಲೆ ಮೀರಿದ ನಡತೆ ಸಾಧುವಲ್ಲ. ಇದೆಯೆಂದು ಅಂಧಾಧುಂದು ಖರ್ಚು ಮಾಡುವುದು, ದುರಾಸೆಯಿಂದ ಬಡವರನ್ನು ಇನ್ನಷ್ಟು ದೋಚುವುದು, ಶಕ್ತಿ ಇದೆಯೆಂದು ದುರ್ಬಲರ ಮೇಲೆ ಸವಾರಿ ಮಾಡುವುದು ಈ ಆಟಾಟೋಪ ಆರ್ಭಟವೆಲ್ಲ ದುರ್ಜನಿಗೆ ಮಾತ್ರ. ಸಜ್ಜನರು ಐಶ್ವರ್ಯವಿದ್ದಾಗ ಆರಕ್ಕೆ ಏರಲಾರರು. ಬಡತನ ಬಂದಾಗ ಮೂರಕ್ಕೆ ಇಳಿಯಲಾರರು. ಧಾರಾಕಾರ ಮಳೆ ಸುರಿದಾಗ ಕೆರೆತೊರೆಸರೋವರಗಳು ದಡವನ್ನು ಹಾಯ್ದು ಹಾವಳಿ ಮಾಡುತ್ತವೆ. ಎಷ್ಟೇ ಮಳೆ ಬರಲಿ ಎಷ್ಟೇ ನದಿಗಳು ನೀರನ್ನು ಸುರಿಯಲಿ ಸಮುದ್ರವು ಉಕ್ಕಿ ಹರಿಯಲಾರದು. ಸದ್ಗುಣಶೀಲನಾದ ಜ್ಞಾನಿ ಎಂದೂ ಗರ್ವಪಡುವುದಿಲ್ಲ. ಅರ್ಧವೂ ತಿಳಿಯದ ಅಜ್ಞಾನಿ ಪಂಡಿತರಿಗಿಂತ ಹೆಚ್ಚು ಅಬ್ಬರಿಸುತ್ತಾನೆ.

Tuesday 19 March 2019

ಸುಭಾಷಿತ - ೫೭

ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಮ್।
ಹೃತಸ್ವಂ ಕಾಮಿನಂ ಚೋರಮಾವಿಶಂತಿ ಪ್ರಜಾಗರಾಃ।
                                                   (ವಿದುರ ನೀತಿ)


ಅನ್ವಯಾರ್ಥ:

 ಬಲವತಾ ಅಭಿಯುಕ್ತಂ (ಬಲಶಾಲಿಗಳಾದ ಇತರರಿಂದ ವಿರೋಧಿಸಲ್ಪಟ್ಟವನನ್ನು)
 ದುರ್ಬಲಂ (ಬಲಹೀನನನ್ನು)
 ಹೀನಸಾಧನಂ (ಸಾಧನ/ಸಾಧನೆ ಕಳಕೊಂಡವನನ್ನು)
 ಹೃತಸ್ವಂ (ತನ್ನದನ್ನು/ತನ್ನತನವನ್ನು ಕಳಕೊಂಡವನನ್ನು)
ಕಾಮಿನಂ (ಕಾಮಾತುರನನ್ನು)
 ಚೋರಂ (ಕಳ್ಳನನ್ನು)
ಪ್ರಜಾಗರಾಃ (ನಿದ್ರಾಹೀನತೆಯ ರೋಗಗಳು)
 ಆವಿಶಂತಿ (ಪ್ರವೇಶಿಸುತ್ತವೆ)


ಭಾವಾರ್ಥ:

ಜೀವಿಗಳಿಗೆ ಆಹಾರವು ಎಷ್ಟು ಅವಶ್ಯವೋ ನಿದ್ರೆಯೂ ಅಷ್ಟೇ ಅವಶ್ಯಕ. ಮನಸ್ಸನ್ನು ಭಯವೋ ಹತಾಶೆಯೋ ಬಯಕೆಯೋ ಯಾವುದೇ ಆದರೂ ಬಲವಾಗಿ ಆವರಿಸಿದರೆ ನಿದ್ರೆ ದೂರವಾಗುತ್ತದೆ. ಆರ್ಥಿಕವಾಗಿಯೋ ಶಾರೀರಿಕವಾಗಿಯೋ ಅಧಿಕಾರದಿಂದಲೋ ಬಲಶಾಲಿಗಳಾಗಿರುವವರ ವಿರೋಧವನ್ನು ಕಟ್ಟಿಕೊಂಡವನು ಯಾವಾಗ ಅವರಿಂದ ಆಘಾತಕ್ಕೊಳಗಾದೇನೋ ಎಂಬ ಭಯದಿಂದಲೇ ಬದುಕಬೇಕಾಗುತ್ತದೆ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ದುರ್ಬಲನಾದರಂತೂ ಸದಾ ಭಯವೇ. ನಿದ್ರೆ ಅವರ ಬಳಿ ಸುಳಿಯದು. ಏನಾದರೂ ಸಾಧಿಸಲೇಬೇಕೆಂದ ಹೊರಟವನಿಗೆ ಸಾಧನೆ ಪೂರ್ತಿಯಾಗುವವರೆಗೂ ನಿದ್ದೆಯಿಲ್ಲ. ಪ್ರಿಯವಾದ ಅಥವಾ ಅವಶ್ಯವಾದ ಸಾಧನಗಳನ್ನು ಕಳಕೊಂಡವನಿಗೂ ಸದಾ ಜಾಗರಣೆಯೇ. ದೈವವಶಾತ್ ಅಥವಾ ಸ್ವಪ್ರಮಾದದಿಂದ ತನ್ನ ಆಸ್ತಿಪಾಸ್ತಿ, ಧನ, ಸಂಬಂಧಿಕರುಗಳನ್ನು ಕಳೆದುಕೊಂಡ ವ್ಯಕ್ತಿಯು ತನಗೆ ಒದಗಿ ಬಂದ ದಾರಿದ್ರ್ಯವನ್ನು ನೆನೆಸಿಕೊಳ್ಳುತ್ತ ನಿದ್ದೆಯನ್ನು ಕಳೆದುಕೊಳ್ಳುತ್ತಾನೆ. ಕಾಮಾತುರನಿಗೆ ನಿದ್ದೆಯಿಲ್ಲ. ನಿದ್ದೆಯ ಗೊಡವೆಯೂ ಇಲ್ಲ ಕಳ್ಳರ ವೃತ್ತಿ ಆರಂಭವಾಗುವುದೇ ಎಲ್ಲರೂ ನಿದ್ರಿಸಿರುವಾಗ. ರಾತ್ರಿಯಿಡಿ ಎಚ್ಚರವಾಗಿದ್ದು ಕಳ್ಳತನ ಮಾಡುವುದು. ಒಟ್ಟಿನಲ್ಲಿ ಕಾಮ ಕ್ರೋಧ ಮೋಹ ಇತರರಲ್ಲಿ ವೈರ ದ್ವೇಷ ಧನದಾಹವೇ ಮೊದಲಾವುಗಳೇ ನಿದ್ರಾನಾಶಕ್ಕೆ ಕಾರಣ. ಅವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇದ್ದವನಿಗೆ ಸುಖನಿದ್ರೆ ಆ ಮೂಲಕ ಆರೋಗ್ಯ ಭಾಗ್ಯ.
ಸುಭಾಷಿತ - ೫೬

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನಮ್।ವನೇ ವಾಸಃ ಕಂದೈರಶನಮಪಿ ದುಃಸ್ಥಂ ವಪುರಿದಮ್।। ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ।
ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ।।


ಅನ್ವಯಾರ್ಥ:

 ಜನ್ಮಸ್ಥಾನಂ (ಹುಟ್ಟಿದ ಸ್ಥಳ)
 ಘಟಃ (ಮಡಕೆ)
 ಮೃಗಪರಿಜನಃ (ಸುತ್ತಲೂ ಇದ್ದ ಪರಿವಾರ ಜಿಂಕೆಯೇ ಮೊದಲಾದ ಪ್ರಾಣಿಗಳು)
 ಭೂರ್ಜವಸನಮ್(ಭೂರ್ಜಪತ್ರಗಳೇ ಬಟ್ಟೆ)
 ವನೇ (ಕಾಡಿನಲ್ಲಿ)
 ವಾಸಃ(ವಾಸ)
 ಕಂದೈಃ ಅಶನಮ್(ಕಂದಮೂಲಗಳಿಂದ ಆಹಾರ)
ಇದಂ ವಪುಃ ದುಃಸ್ಥಂ(ಈ ಶರೀರವೂ ಸ್ಥಿರವಾದ್ದಲ್ಲ)
(ತಥಾಪಿ)(ಹಾಗಾದರೂ)
 ಯದ್(ಹೇಗೆ)
 ಅಗಸ್ತ್ಯಃ (ಅಗಸ್ತ್ಯನು)
ಪಾಥೋಧಿಂ (ಸಮುದ್ರವನ್ನು)
 ಕರಾಂಭೋಜಕುಹರೇ ಅಕೃತ( ಬೊಗಸೆಯಲ್ಲಿ) ಹಿಡಿದನೋ ಹಾಗೆಯೇ )
 ಮಹತಾಂ(ಶ್ರೇಷ್ಠರ)
 ಕ್ರಿಯಾಸಿದ್ಧಿಃ (ಕಾರ್ಯಸಾಧನೆಯು)
ಸತ್ವೇ ಭವತಿ (ಅಂತಃಸತ್ವದ ಸಾಮರ್ಥ್ಯದಿಂದಲೇ ಆಗುತ್ತದೆ.)
 ನ ಉಪಕರಣೇ(ಸಾಧನ ಸಲಕರಣೆಗಳಿಂದಲ್ಲ)

ಭಾವಾರ್ಥ:

ಕ್ರಿಯಾಸಿದ್ಧಿಗೋಸ್ಕರ ಮಹಾತ್ಮರು ಉಪಕರಣಕ್ಕಾಗಿ ಕಾಯುವುದಿಲ್ಲ. ಅಂತಃಸತ್ವವೇ ಅವರಿಗೆ ಸಾಧನ. . ಅಗಸ್ತ್ಯಮಹರ್ಷಿ ಹುಟ್ಟಿದ್ದು ಕಾಡಿನಲ್ಲಿ ಒಂದು ಕೊಡದಲ್ಲಿ. ಸಹವಾಸ ಅಲ್ಲಿನ ಮೃಗಪಕ್ಷಿಗಳೊಂದಿಗೆ. ಬಟ್ಟೆಯ ನಾರುಮಡಿ ವಾಸಕ್ಕೆ ಕಾಡಿನ ಎಲೆಮನೆ. ಆಹಾರ ಗಡ್ಡೆಗೆಣಸು. ಶರೀರವೋ ಆ ಸಾಗರದ ಮುಂದೆ ಏನೂ ಅಲ್ಲ. ಹಾಗಿದ್ದರೂ ಆ ಮಹಾಸಾಗರವನ್ನೇ ಬೊಗಸೆಯಲ್ಲಿ ಹಿಡಿದು ಆಪೋಶನಗೈದ!! ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆಯಿದೆ. ಸಾಧಿಸಬೇಕೆಂಬ ಛಲವಿದ್ದರೆ ಸಲಕರಣೆಯಿಲ್ಲ ಎಂಬ ನೆವನ ಬೇಡ. ಸಾರಥಿಯಿದ್ದಿದ್ದರೆ ಕೌರವಸೈನ್ಯವನ್ನೆಲ್ಲಾ ಧ್ವಂಸಮಾಡಿ ಬಿಡುತ್ತಿದ್ದೆ ಎಂದ ಉತ್ತರಕುಮಾರನಂತೆ ಪೌರುಷ ಕೊಚ್ಚುವುದರಿಂದ ಕಾರ್ಯ ಸಾಗದು. ಅದಕ್ಕೆ ಸಾಮರ್ಥ್ಯ ಬೇಕು ಉಪಕರಣ ಎಂದಿಗೂ ಮುಖ್ಯವಲ್ಲ. ಮಾಡಿಯೇ ಮಾಡುತ್ತೇನೆಂಬ ಮಹತ್ತಾದ ಇಚ್ಛೆ, ಮಾಡುವ ಸಾಮರ್ಥ್ಯ, ದೃಢನಿಶ್ಚಯ, ಸತತ ಪ್ರಯತ್ನ ಇರಬೇಕು. ಮಾಡುತ್ತಾ ಹೋದಂತೆ ಅನುಭವ, ಜ್ಞಾನ ತಾನಾಗಿಯೇ ಬರುತ್ತದೆ, ಸಾಮರ್ಥ್ಯ ಹೆಚ್ಚುತ್ತದೆ. ಇಚ್ಛೆಯಿಂದ ಕ್ರಿಯೆ ಅದರಿಂದ ಜ್ಞಾನ ಆ ಮೂಲಕ ಸಾಮರ್ಥ್ಯ ಮತ್ತು ಸಾಧನೆ. ಅದರಿಂದ ಇಚ್ಛಾಶಕ್ತಿಕ್ರಿಯಾಶಕ್ತಿಜ್ಞಾನಶಕ್ತಿಸ್ವರೂಪಿಣಿಯಾದ ಮಹಾಮಾತೆಯ ಅನುಗ್ರಹ!! ಅಲ್ಪಸ್ವಲ್ಪವೇ ಆಗಲಿ ಮಾಡುತ್ತಾ ಹೋದಂತೆ ನಿಧಾನವಾಗಿಯಾದರೂ ಕಾರ್ಯಸಾಧನೆ ನಿಶ್ಚಿತ. ಸಿದ್ಧಿಯ ಸತ್ವ ಅಂತರಂಗದಲ್ಲಿ ಉದಿಸಬೇಕು ಅಷ್ಟೇ.
 ಹಾರಿ ಹೋಗಲು ಬಲವಾದ ರೆಕ್ಕೆಪುಕ್ಕಗಳಿಲ್ಲದಿದ್ದರೂ ಸದಾ ಸಾಗುತ್ತಿರುವ ಇರುವೆ ನೂರಾರು ಮೈಲಿ ದೂರ ತಲುಪಬಲ್ಲುದು. ಆ ಶಕ್ತಿ ಸತ್ತ್ವ ಅದಕ್ಕೂ ಇದೆ. ಸುಮ್ಮನಿದ್ದರೆ ವಾಯುವೇಗದ ಸಾಮರ್ಥವಿರುವ ಗರುಡನೂ ಕೂಡಾ ಗೇಣುದೂರದ ಗುರಿಯನ್ನೂ ಸೇರಲಾರ. ಮಾನಸಿಕ ಶಾರೀರಿಕ ಸತ್ವ ಸಾಮರ್ಥ್ಯವುಳ್ಳವನಿಗೆ ಸಲಕರಣೆ ಕೇವಲ ಸಹಾಯಕ್ಕಾಗಿ ಮಾತ್ರ. ಸಲಕರಣೆ ಇಲ್ಲದಿರುವುದು ಕಾರ್ಯಸಾಧನೆಗೆ ಅಡ್ಡಿಯಾಗದು.