Tuesday 29 January 2019

ಸುಭಾಷಿತ ೧೦

  ತೃಷ್ಣಾಂ ಛಿಂಧಿ ಭಜ ಕ್ಷಮಾಂ ತ್ಯಜ ಮದಂ ಪಾಪೇ ರತಿಂ ಮಾ ಕೃಥಾಃ। ಸತ್ಯಂ ಬ್ರೂಹ್ಯನುಯಾಹಿ ಸಾಧುಪದವೀಂ ಸೇವಸ್ವ ವಿದ್ವಜ್ಜನಮ್॥
ಮಾನ್ಯಾನ್ ಮಾನಯ ವಿದ್ವಿಷೋऽ– ಪ್ಯನುನಯಂ ಪ್ರಚ್ಛಾದಯ ಸ್ವಾನ್ ಗುಣಾನ್।
ಕೀರ್ತಿಂ ಪಾಲಯ ದುಃಖಿತೇ ಕುರುದಯಾಮೇತತ್ಸತಾಂ
ಚೇಷ್ಟಿತಮ್॥

ಅನ್ವಯ ಅರ್ಥ:

ತೃಷ್ಣಾಂ (ಆಸೆಯನ್ನು)
 ಛಿಂಧಿ (ತೊಡೆದುಹಾಕು)
 ಕ್ಷಮಾಂ ಭಜ (ಕ್ಷಮಾಗುಣವನ್ನು ಹೊಂದು)
ಮದಂ ತ್ಯಜ(ಮದವನ್ನು ಬಿಡು)
 ಪಾಪೇ (ಪಾಪದಲ್ಲಿ)
ರತಿಂ (ಪ್ರೀತಿಯನ್ನು)
ಮಾ ಕೃಥಾಃ(ಮಾಡಬೇಡ)
ಸತ್ಯಂ ಬ್ರೂಹಿ(ಸತ್ಯವನ್ನು ನುಡಿ)
 ಸಾಧುಪದವೀಂ(ಸಜ್ಜನರ ಹಾದಿಯನ್ನು) ಅನುಯಾಹಿ(ಅನುಸರಿಸು)
 ವಿದ್ವಜ್ಜನಂ(ವಿದ್ವಾಂಸರನ್ನು)
 ಸೇವಸ್ವ(ಸೇವೆಮಾಡು)
ಮಾನ್ಯಾನ್ (ಹಿರಿಯರನ್ನು/ ಗೌರವಿಸಬೇಕಾದವರನ್ನು) ಮಾನಯ(ಗೌರವಿಸು)

 ವಿದ್ವಿಷಃ ಅಪಿ(ದ್ವೇಷಿಸುವವರನ್ನೂ) ಅನುನಯ(ಅನುನಯಿಸು)
 ಸ್ವಾನ್ ಗುಣಾನ್(ತನ್ನಲ್ಲಿರುವ ಗುಣಗಳನ್ನು) ಪ್ರಚ್ಚಾದಯ(ಮುಚ್ಚಿಡು)
 ಕೀರ್ತಿಂ(ಕೀರ್ತಿಯನ್ನು)
 ಪಾಲಯ(ಉಳಿಸಿಕೊ)
 ದುಃಖಿತೇ(ದುಃಖಿಗಳಲ್ಲಿ)
ದಯಾಂ ಕುರು(ದಯೆತೋರು)
 ಏತತ್(ಇದು)
ಸತಾಂ(ಸಜ್ಜನರ)
ಚೇಷ್ಟಿತಮ್(ನಡತೆಯು).


ಭಾವಾರ್ಥ:

 ದೊಡ್ಡವರೆನಿಸಿಕೊಳ್ಳುವುದು ತೋರಿಕೆಯ ದೊಡ್ಡತನದಿಂದಲ್ಲ, ನಯವಿನಯದಿಂದ. ದೊಡ್ಡವರೆನಿಸಿಕೊಳ್ಳುವುದು ಭೋಗದಿಂದಲ್ಲ, ತ್ಯಾಗದಿಂದ. ತಾನು ತನಗೆ ತನ್ನದು ಎಂಬ ಲೋಭವನ್ನು ಬಿಟ್ಟು ನಾವು ನಮಗೆ ನಮ್ಮದು ಎಂದಾಗ ದೊಡ್ಡವರಾಗುತ್ತೇವೆ. ದಂಡಿಸುವ ಶಕ್ತಿಯಿದ್ದೂ ಮದದಿಂದ ಪ್ರತೀಕಾರ ಮಾಡದೆ ಕ್ಷಮಿಸುವುದು ದೊಡ್ಡವರ ಲಕ್ಷಣ. ಸಜ್ಜನರು ಎಷ್ಟೇ ಕಷ್ಟ ಬಂದರೂ ಸತ್ಯವನ್ನು ಬಿಡಲಾರರು ಪಾಪದಲ್ಲಿ ತೊಡಗಲಾರರು. ವಿನಯದಿಂದ ಸಾಧುಜನರನ್ನು ಅನುಸರಿಸುವರು. ತಾವು ಸ್ವತಃ ವಿದ್ವಾಂಸರಾದರೂ ಇತರ ಗರ್ವಪಡದೆ ವಿದ್ವಜ್ಜನರನ್ನೂ ಹಿರಿಯರನ್ನೂ ಗೌರವಿಸುವರು. ದ್ವೇಷಿಸುವವರನ್ನೂ ಪ್ರೀತಿಯಿಂದ ಗೆಲ್ಲುವರು. ತಮ್ಮ ಗುಣಸಾಮರ್ಥ್ಯಗಳನ್ನು ಹೊಗಳಿಕೊಳ್ಳದೆ ವಿನೀತರಾಗಿರುವರು. ದುಃಖಿಗಳ ದುಃಖದಲ್ಲಿಭಾಗಿಗಳಾಗಿ ಕಣ್ಣೊರಸುವರು. ಇದೇ ಸಜ್ಜನರ ದಾರಿ. ಫಲಗಳಿಂದ ಕೂಡಿದ ತರುಗಳು ಗರ್ವದಿಂದ ಬೀಗುವುದಿಲ್ಲ, ನಮ್ರತೆಯಿಂದ ಬಾಗುತ್ತವೆ. ಎತ್ತರದಲ್ಲಿರುವ ಮೋಡಗಳು ಹೊಸ ನೀರಿನಿಂದ ತುಂಬಿದಾಗ ವಿನಯವಾಗಿ ಭೂಮಿಗಿಳಿಯುತ್ತವೆ. ಹಾಗಿರುವಾಗ ಬುದ್ಧಿಯುಳ್ಳವರಾದ ನಾವು ಮಹಾಮನೀಷಿಗಳೆಂದು ಏಕೆ ಬೀಗಬೇಕು? ಸಜ್ಜನರ ದಾರಿಯಲ್ಲಿ ಸಾಗಿ ದೊಡ್ಡವರಾಗಲು ಪ್ರಯತ್ನಿಸೋಣ.

No comments:

Post a Comment