Thursday 17 January 2019

ಸುಭಾಷಿತ -  ೫

ಕ್ಷಿಪ್ರಂ ವಿಜಾನಾತಿ ಚಿರಂ ಶೃಣೋತಿ।
ವಿಜ್ಞಾಯ ಚಾರ್ಥಂ ಭಜತೇ ನ ಕಾಮಾತ್॥
ನಾಸಂಪೃಷ್ಟೋ  ಹ್ಯುಪಯುಂಕ್ತೇ ಪರಾರ್ಥೇ।
ತತ್ಪ್ರಜ್ಞಾನಂ ಪ್ರಥಮಂ ಪಂಡಿತಸ್ಯ॥

ಅನ್ವಯ ಅರ್ಥ:

ಕ್ಷಿಪ್ರಂ (ಶೀಘ್ರವಾಗಿ)
ವಿಜಾನಾತಿ (ತಿಳಿದುಕೊಳ್ಳುತ್ತಾನೆ)
ಚಿರಂ(ದೀರ್ಘ ಕಾಲ)
ಶೃಣೋತಿ (ಕೇಳುತ್ತಾನೆ)
ವಿಜ್ಞಾಯ ಚ(ತಿಳಿದಿದ್ದರೂ)
ಕಾಮಾತ್(ಆಸೆಗೊಳಗಾಗಿ)
ಅರ್ಥಂ(ಲಾಭವನ್ನು)
ನ ಲಭತೇ (ಹೊಂದಬಯಸುವುದಿಲ್ಲ)
ಅಸಂಪೃಷ್ಟಃ(ಕೇಳದೆಯೇ)
ಪರಾರ್ಥೇ(ಅನ್ಯರ ವಿಷಯದಲ್ಲಿ)
ನ ಹಿ ಉಪಯುಂಕ್ತೇ (ತೊಡಗಿಸಿಕೊಳ್ಳುವುದಿಲ್ಲ)
ತತ್(ಅದು)
ಪಂಡಿತಸ್ಯ(ಜ್ಞಾನಿಯ)
ಪ್ರಜ್ಞಾನಮ್(ಬುದ್ಧಿಯು)

ಭಾವಾರ್ಥ:

ಜ್ಞಾನಿಯಾದವನು  ಯಾವುದೇ ವಿಷಯಗಳನ್ನು ಬಹಳ ಬೇಗನೆ ತಿಳಿದುಕೊಳ್ಳುತ್ತಾನೆ. ತಿಳಿದಿದ್ದರೂ ತಾನು ತಿಳಿದಿರುವುದೇ ಸರಿ ಎಂದುಕೊಳ್ಳುವುದಿಲ್ಲ.ಒಮ್ಮೆಲೇ ಕಾರ್ಯಪ್ರವೃತ್ತನಾಗುವುದಿಲ್ಲ.
 ಇತರರ ಸಲಹೆ ಸೂಚನೆಗಳನ್ನು ಗೌರವಿಸಿ  ಅವರ ಮಾತುಗಳನ್ನು ಸಹನೆಯಿಂದ ಸಂಪೂರ್ಣವಾಗಿ ಕೇಳುತ್ತಾನೆ. ಸಾಧಕ ಬಾಧಕಗಳನ್ನು ಚೆನ್ನಾಗಿ ವಿಮರ್ಶಿಸಿಕೊಳ್ಳುತ್ತಾನೆ.
 ಲಾಭವಿದೆಯೆಂದು ಅರಿತಿದ್ದರೂ ಪುರುಷಾರ್ಥಕ್ಕಾಗಿ ತೊಡಗುತ್ತಾನೆಯೇ ಹೊರತು ಸ್ವಾರ್ಥಕ್ಕಾಗಿ ಎಂದೂ ಕಾರ್ಯಪ್ರವೃತ್ತನಾಗುವದಿಲ್ಲ.
ಹಾಗೆಂದು ಇತರರು ಅಪೇಕ್ಷೆ ಪಡದೆ ಅವರ ವಿಷಯದಲ್ಲಿ ಎಂದಿಗೂ  ತಲೆಹಾಕುವದಿಲ್ಲ.
ತಿಳಿದಿದೆಯೆಂದು ವೃಥಾ ಕಾರ್ಯವೆಸಗಲಾರ.
 ಅಗತ್ಯವಿದ್ದಲ್ಲಿ ಉಪಕರಿಸಲು ಹಿಂಜರಿಯಲಾರ.
ಇದು ಪಂಡಿತರ ಲಕ್ಷಣ.

No comments:

Post a Comment