Tuesday 12 March 2019

ಸುಭಾಷಿತ - ೫೨

ಉತ್ಸಾಹಸಂಪನ್ನಮದೀರ್ಘಸೂತ್ರಿಣಂ
ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್।
ಶೂರಂ ಕೃತಜ್ಞಂ ದೃಢಸೌಹೃದಂ ಚ
ಲಕ್ಷ್ಮೀ ಸ್ವಯಂ ಯಾತಿ ನಿವಾಸಹೇತೋಃ।।

ಅನ್ವಯಾರ್ಥ:

ಉತ್ಸಾಹಸಂಪನ್ನಂ(ಉತ್ಸಾಹದಿಂದ ಕೂಡಿದವನನ್ನು) ಅದೀರ್ಘಸೂತ್ರಿಣಂ(ಕಾಲಕಳೆಯದವನನ್ನು) ಕ್ರಿಯಾವಿಧಿಜ್ಞಂ(ಕಾರ್ಯವಿಧಾನವನ್ನು ಅರಿತವನನ್ನು) ವ್ಯಸನೇಷು ಅಸಕ್ತಂ(ದುಶ್ಚಟಗಳಲ್ಲಿ ಆಸಕ್ತಿ ಇಲ್ಲದವನನ್ನು) ಶೂರಂ(ಶೂರನನ್ನು)
 ಕೃತಜ್ಞಂ (ಕೃತಜ್ಞನನ್ನು)
 ದೃಢಸೌಹೃದಂ ಚ(ಮತ್ತು
 ದೃಢವಾದ ಸ್ನೇಹಪ್ರವೃತ್ತಿ ಉಳ್ಳವನನ್ನು) ನಿವಾಸಹೇತೋಃ(ವಸತಿಯ ಕಾರಣಕ್ಕೆ)
 ಲಕ್ಷ್ಮೀ (ಲಕ್ಷ್ಮಿಯು)
 ಸ್ವಯಂ (ತಾನಾಗಿಯೇ)
 ಯಾತಿ (ಪ್ರವೇಶಿಸುತ್ತಾಳೆ)


ಭಾವಾರ್ಥ:

 ವಿಘ್ನಗಳು ಬರುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ಪ್ರಯತ್ನ ಮಾಡದೇ ಇರುವುದು, ಆರಂಭಿಸಿ ಅರ್ಧದಲ್ಲೇ ನಿಲ್ಲಿಸುವುದು ಸಲ್ಲದು. ಉತ್ತಮರು ಎಷ್ಟೇ ವಿಘ್ನಗಳು ಬಂದರೂ ಉತ್ಸಾಹ ಕಳೆದುಕೊಳ್ಳದೆ ಹಿಡಿದ ಕಾರ್ಯವನ್ನು ಪೂರೈಸುವರು. ಆ ಛಲವಿದ್ದರೆ ದೈವಸಹಾಯ ತಾನಾಗಿಯೇ ಬರುತ್ತದೆ.

ದೀರ್ಘಸೂತ್ರೀ ಎಂದರೆ ಸೋಮಾರಿತನದಿಂದ ನಾಳೆ ಮಾಡಿದರಾಯಿತು ಎಂದು ಕಾಲಕಳೆಯುವವನು. ಅವಕಾಶಗಳು ಬಂದಾಗ ಉಪಯೋಗಿಸಿಕೊಳ್ಳುವುದು ಜಾಣತನ. ಕಳಕೊಂಡರೆ ಇನ್ನೊಮ್ಮೆ ಸಿಗುವುದು ಕಷ್ಟ. ಕಳೆದುಹೋದ ಕಾಲ ಎಂದಿಗೂ ಹಿಂದಿರುಗದು.

 ಮಾಡುವ ಕೆಲಸದ ಸಾಧಕ ಬಾಧಕಗಳನ್ನು ಚಿಂತಿಸಿ ಸರಿಯಾದ ನ್ಯಾಯಯುತವಾದ ರೀತಿಯಲ್ಲಿ ಕಾರ್ಯಪ್ರವೃತ್ತನಾದರೆ ಸೋಲೆಂಬುದಿಲ್ಲ. ಕಾರ್ಯವಿಧಾನವನ್ನು ಅರಿತಿರಬೇಕು ಅಷ್ಟೇ.

ದುಶ್ಚಟಗಳಲ್ಲಿ ಒಮ್ಮೆ ಆಸಕ್ತನಾದರೆ ಕಾರ್ಯಸಾಧನೆಗೆ ಅದಕ್ಕಿಂತ ಅಡ್ಡಿ ಬೇರೊಂದಿಲ್ಲ. ಸಾಧಿಸುವುದು ಬಿಡಿ, ಈಗಾಗಲೇ ಸಾಧಿಸಿದ್ದನ್ನೂ ಅವು ಇಲ್ಲವಾಗಿಸುತ್ತವೆ.

ಅಳುಕು ಅಂಜಿಕೆ ಎಂದಿದ್ದರೂ ಬಾಧಕವೇ. ಸಾಧಿಸಬೇಕಾದ ಗುರಿ ಸಾಧುವಾಗಿದ್ದರೆ ಅಂಜಿಕೆ ಯಾಕೆ? ಅಳುಕು ಯಾಕೆ?  ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಗೆಲುವು ನಿಶ್ಚಿತ.

ಎಷ್ಟೇ ಪರಿಣತಿಯಿರಲಿ ಸಾಮರ್ಥ್ಯವಿರಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಇನ್ನೊಬ್ಬರ ಸಹಾಯ ಸಹಕಾರ ಬೇಕೇ ಬೇಕು. ಅದನ್ನು ಎಂದಿಗೂ ಮರೆಯುವಂತಿಲ್ಲ. ಕೃತಜ್ಞತೆ ಉಳ್ಳವನಿಗೆ ಸಮಾಜದ ಸಹಕಾರ ಸದಾ ಇರುತ್ತದೆ.
 ದೈವಸಹಾಯವೂ ಇದೆ.
   ಕೃತಘ್ನತೆಗೆ ಪ್ರಾಯಶ್ಚಿತ್ತ ಇಲ್ಲವೇ ಇಲ್ಲ. ಕಷ್ಟಕಾಲದಲ್ಲಿ ನೆರವಾಗುವವನೇ ಬಂಧು ಮಿತ್ರ. ಆದ್ದರಿಂದ ಮಿತ್ರರಿದ್ದಲ್ಲಿ ಕಷ್ಟದ ಭಾರ ಕಡಿಮೆ. ದೃಢವಾದ ಮೈತ್ರೀಭಾವವು ಗೆಲುವಿನ ಸೋಪಾನ. ಉತ್ಸಾಹ, ಚುರುಕುತನ, ಕಾರ್ಯಕ್ಷಮತೆ,ದುಶ್ಚಟಗಳಿಂದ ದೂರವಿರುವುದು,ಧೈರ್ಯ, ಕೃತಜ್ಞತೆ, ಮೈತ್ರೀಭಾವ ಈ ಎಲ್ಲಾ ಗುಣಗಳನ್ನು ರೂಢಿಸಿಕೊಂಡವನನ್ನು ಲಕ್ಷ್ಮಿಯು ತಾನಾಗಿಯೇ ಹುಡುಕಿಕೊಂಡು ಬಂದು ಅಲ್ಲೇ ನೆಲೆಸುತ್ತಾಳೆ. 

No comments:

Post a Comment