Tuesday 19 March 2019

ಸುಭಾಷಿತ - ೫೫

ವಿಷಸ್ಯ ವಿಷಯಾಣಾಂ ಚ ದೃಶ್ಯತೇ ಮಹದಂತರಮ್।ಉಪಭುಕ್ತಂ ವಿಷಂ ಹಂತಿ ವಿಷಯಾಃ ಸ್ಮರಣಾದಪಿ।।

ಅನ್ವಯಾರ್ಥ:

ವಿಷಸ್ಯ(ವಿಷಕ್ಕೂ)
 ವಿಷಯಾಣಾಂ ಚ (ಇಂದ್ರಿಯಸುಖಗಳಿಗೂ) ಮಹದಂತರಂ(ಬಹಳ ವ್ಯತ್ಯಾಸವು)
ದೃಶ್ಯತೇ(ಕಾಣಿಸುತ್ತದೆ)
 ವಿಷಂ (ವಿಷವು)
 ಉಪಭುಕ್ತಂ(ತಿನ್ನಲ್ಪಟ್ಟಾಗ)
 ಹಂತಿ(ಕೊಲ್ಲುತ್ತದೆ)
ವಿಷಯಾಃ(ಇಂದ್ರಿಯಸುಖಗಳು)
 ಸ್ಮರಣಾತ್ ಅಪಿ(ಕೇವಲ ನೆನೆಯುವುದರಿಂದಲೇ)
 (ಘ್ನಂತಿ)(ಕೊಲ್ಲುತ್ತವೆ)


ಭಾವಾರ್ಥ:

 ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಐದು ಇಂದ್ರಿಯವಿಷಯಗಳು. ಐಹಿಕ ಸುಖಾನುಭ ಈ ಮೂಲಕವೇ. ಇವು ಎಷ್ಟು ಅಗತ್ಯವೋ ಅಷ್ಟೇ ಹಾನಿಕರ. ಆನೆಯ ಸಹವಾಸ ಇದ್ದಂತೆ ಇವುಗಳ ಸಹವಾಸ. ನಮ್ಮ ಹಿಡಿತದಲ್ಲಿ ಆನೆಯಿದ್ದರೆ ಎಷ್ಟು ದೊಡ್ಡ ದೊಡ್ಡ ಕಾರ್ಯವನ್ನೂ ಸುಲಭವಾಗಿ ಮಾಡಬಹುದು. ಆನೆಯ ಹಿಡಿತಕ್ಕೆ ನಾವು ಸಿಕ್ಕಿದರೆ? ಅಲ್ಲಿಗೆ ಮುಗಿಯಿತು. ಹಾಗೆಯೇ ಇಂದ್ರಿಯ ಸುಖಕ್ಕೆ ಅಡಿಯಾಳಾದರೆ ಸರ್ವನಾಶ. ವಿಷಕ್ಕೂ ವಿಷಯಕ್ಕೂ ಹೆಸರಿನಲ್ಲಿ ಅಕ್ಷರಮಾತ್ರವೇ ವ್ಯತ್ಯಾಸ ಇರಬಹುದು, ಆದರೆ ಕಾರ್ಯದಲ್ಲಿ ಅಗಾಧ ಅಂತರವಿದೆ. ವಿಷವನ್ನು ಸೇವಿಸಿದರೆ ಮಾತ್ರ ಪ್ರಾಣನಾಶ. ವಿಷಯವನ್ನು ನೆನೆದರೂ ಸಾಕು ಅಧಃಪತನ.
  ವಿಷಯಗಳನ್ನು ನೆನೆದೊಡನೇ ಮನಸ್ಸು ಅಲ್ಲಿ ಅಂಟಿಕೊಂಡು ಅದರ ಬಯಕೆಯುಂಟಾಗುತ್ತದೆ. ಬಯಕೆ ಈಡೇರದಿದ್ದಾಗ ಕ್ರೋಧವುಂಟಾಯಿತು. ಕೋಪ ಬಂದಾಗ ಹಿಂದುಮುಂದು ಯೋಚನೆಯಿಲ್ಲದೆ ಅವಿವೇಕದ ವರ್ತನೆ, ಸ್ಮೃತಿಭ್ರಂಶ. ಅದರಿಂದ ಬುದ್ಧಿ ನಾಶ, ಪರಿಣಾಮವಾಗಿ ಸರ್ವನಾಶ. ಶೂರ್ಪಣಖಿಯ ಮಾತಿನಿಂದ ರಾವಣನ ಮನಸ್ಸಿನಲ್ಲಿ ಸೀತೆಯ ಕಲ್ಪನೆ ಬಂದುದರ ಪರಿಣಾಮವಾಗಿ ಸರ್ವನಾಶವಾಯಿತು. ಆದುದರಿಂದ ವಿಷಯಗಳೆಂಬ ಆನೆಯ ಮೇಲೆ ನಾವಿರಬೇಕೇ ಹೊರತು ಅದೇ ಆನೆ ನಮ್ಮ ಮೇಲೆ ಬಿದ್ದರೆ ಉಳಿಗಾಲವಿಲ್ಲ. 

No comments:

Post a Comment