Tuesday 5 March 2019

ಸುಭಾಷಿತ - ೪೮

ಮ್ರಿಯಮಾಣಂ ಮೃತಂ ಬಂಧುಂ ಶೋಚಂತೇ ಪರಿದೇವಿನಃ।ಆತ್ಮಾನಂ ನಾನುಶೋಚಂತಿ ಕಾಲೇನ ಕವಲೀಕೃತಮ್।।



ಅನ್ವಯಾರ್ಥ:

 ಮ್ರಿಯಮಾಣಂ (ಸಾಯುತ್ತಿರುವ)
 ಮೃತಂ(ಸತ್ತಿರುವ)
 ಬಂಧುಂ (ಪ್ರತಿ)
 (ಬಂಧುವನ್ನು ಕುರಿತು)
 ಪರಿದೇವಿನಃ (ಪ್ರೀತಿಪಾತ್ರರು)
 ಶೋಚಂತೇ(ದುಃಖಿಸುತ್ತಾರೆ.)
 ಕಾಲೇನ (ಕಾಲನಿಂದ/ವಿಧಿಯಿಂದ)   ಕವಲೀಕೃತಂ(ತಿನ್ನಲ್ಪಪಡುತ್ತಿರುವ)
 ಆತ್ಮಾನಂ(ತನ್ನನ್ನು)(ಕುರಿತು)
 ನ ಅನುಶೋಚಂತಿ (ಚಿಂತಿಸುವುದಿಲ್ಲ)



 ಭಾವಾರ್ಥ:

ಬಂಧುವೋ ಸ್ನೇಹಿತನೋ ಇನ್ನೊಬ್ಬ ಪರಕೀಯನೋ ಸಾಯುತ್ತಿರುವುದನ್ನೋ ಸತ್ತಿರುವುದನ್ನೋ ನೋಡಿ ನೊಂದುಕೊಂಡು ಪ್ರಲಾಪಿಸುತ್ತಾರೆ. ಪಾಪ ಸಾಯಬಾರದಿತ್ತು, ಹಿಂದೆ ಕಷ್ಟ ಪಟ್ಟವನು, ಈಗ ಆರಾಮವಾಗಿ ಬದುಕಬೇಕಾದ ಸಮಯದಲ್ಲಿ ತೀರಿಹೋದ, ಮಡದಿ ಮಕ್ಕಳ ಗತಿಯೇನು? ಎಂದೆಲ್ಲಾ ಸಂತಾಪಪಡುವವರೇ ಎಲ್ಲರೂ. ಆದರೆ ತಾನೂ ಸರದಿಯಲ್ಲಿದ್ದೇನೆ. ಕಾಲನು ಬಾಯ್ದೆರೆದು ನಿಂತಿದ್ದಾನೆ. ಯಾವಾಗ ಅವನ ದವಡೆಯೊಳಗೆ ಸೇರುತ್ತೇನೋ ಎಂದು ಯೋಚಿಸುವವರು ಯಾರೂ ಇಲ್ಲ ಆ ಯೋಚನೆ ಬಂದೊಡನೇ ಮನಸ್ಸು ಧಾರ್ಮಿಕತೆಯೆಡೆಗೆ ಹರಿಯುತ್ತದೆ, ಹರಿಯಬೇಕು. ಮೃತ್ಯುವು ಜುಟ್ಟು ಹಿಡಿದಿದ್ದಾನೆ. ಇನ್ನೇನು ಪಾಶ ಹಾಕುವವನೇ ಎನಿಸಿದಾಗ ಭಗವಂತನ ನಾಮಸ್ಮರಣೆ ಆಗದಿದ್ದೀತೇ! ಅದೇ ಭಾವ ಸದಾ ಇರಬೇಕು, ಧರ್ಮಾಚರಣೆಯಲ್ಲಿ ತೊಡಗಬೇಕು. ಈಗಿನ್ನೂ ಯುವಕ ಜಪತಪ ದಾನಧರ್ಮದ ಯೋಚನೆ ಈಗೇಕೆ? ಆಮೇಲೆ ನೋಡಿಕೊಳ್ಳೋಣ ಎಂದರೆ ಕಾಲನ ಗತಿಯನ್ನು ಕಂಡವರಾರು? ಯಾವನು ಸಂತಸದಿಂದ ಇರುತ್ತಾನೆ? ಪ್ರಪಂಚದಲ್ಲಿ ಪರಮಾಶ್ಚರ್ಯ ಯಾವುದು? ಎಂಬ ಯಕ್ಷಪ್ರಶ್ನೆಗೆ ಧರ್ಮಜ ಉತ್ತರಿಸುತ್ತಾನೆ: ಸತ್ಯವಂತನು ಸಂತೋಷದಿಂದಿರುತ್ತಾನೆ. ಕಣ್ಣೆದುರೇ ಇತರರು ಸಾಯುವುದನ್ನು ದಿನವೂ ನೋಡುತ್ತಿದ್ದರೂ ತಾನು ಮಾತ್ರ ಸಾಯುವವನಲ್ಲ ಎಂದುಕೊಳ್ಳುತ್ತಾನಲ್ಲ ಮಾನವ!! ಇದಕ್ಕಿಂತ ಆಶ್ಚರ್ಯ ಇನ್ನೇನಿದೆ? ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಾ ಹೋಗುವಾಗ ಎಷ್ಟೋ ಸಲ ಅಪಘಾತಗಳನ್ನು ಕಣ್ಣಾರೆ ಕಾಣುತ್ತೇವಲ್ಲ. ಕ್ಷಣಕಾಲ ನಿಲ್ಲಿಸಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ, ಓಹೋ ತಡವಾಯ್ತು ಎಂದು ಮೊದಲಿನಿಂದಲೂ ವೇಗವಾಗಿ ಮುಂದುವರಿಯುತ್ತೇವೆ, ನಮಗೆ ಅಪಘಾತ ಆಗುವುದೇ ಇಲ್ಲ, ನಾವು ಸಾಯುವವರೇ ಅಲ್ಲ ಎಂಬ ಹಾಗೆ. ಇದಕ್ಕಿಂತ ಆಶ್ಚರ್ಯ ಇನ್ನೇನಿದೆ?!!!

No comments:

Post a Comment