Thursday 21 March 2019

ಸುಭಾಷಿತ - ೫೯

ವರಂ ಸಖೇ ಸತ್ಪುರಷಾಪಮಾನಿತಃ ನ ನೀಚಸಂಸರ್ಗಗುಣೈರಲಂಕೃತಃ।
ವರಾಶ್ವಪಾದೇನ ಹತೋ ವಿರಾಜತೇ ನ ರಾಸಭಸ್ಯೋಪರಿ ಸಂಸ್ಥಿತೋ ನರಃ।


ಅನ್ವಯ:

ಸಖೇ! ಸತ್ಪುರುಷಾಪಮಾನಿತಃ ವರಮ್! ನೀಚಸಂಸರ್ಗಗುಣೈಃ ಅಲಂಕೃತಃ ಅಪಿ ನ ವರಮ್। ವರಾಶ್ವಪಾದೇನ ಹತಃ ಅಪಿ ವಿರಾಜತೇ। ರಾಸಭಸ್ಯ ಉಪರಿ ಸಂಸ್ಥಿತಃ ಅಪಿ ನ ವಿರಾಜತೇ।

ಭಾವಾರ್ಥ:

ನೀಚರಿಂದ ಸಿಗುವ ಸಂಮಾನಕ್ಕಿಂತ ಸತ್ಪುರುಷರಿಂದ ಅವಮಾನಿತನಾಗುವುದು ಲೇಸು. ಶ್ರೇಷ್ಠವಾದ ಕುದುರೆಯ ಕಾಲಿನಡಿ ಸಿಕ್ಕು ಸತ್ತರೂ ಆಗಬಹುದು. ಕತ್ತೆಯ ಮೇಲೇರಿ ಮೆರವಣಿಗೆ ಮಾತ್ರ ಬೇಡ.
 ಪೀನಾರಿ ಎಂಬುದೊಂದು ಮರ. ಅದರ ತಿರುಳಿಗೆ ಮಲದ ವಾಸನೆಯಿದೆ. ಅದರೊಂದಿಗೆ ಆಟವಾಡಿದರೂ ಮೈಯೆಲ್ಲಾ ವಾಸನೆಯೇ. ಶ್ರೀಗಂಧದೊಂದಿಗೆ ಗುದ್ದಾಡಿದರೂ ಪರಿಮಳವೇ ತಾನೇ! ಆದ್ದರಿಂದ ಪೀನಾರಿಯೊಂದಿಗೆ ಆಟವಾಡುವುದಕ್ಕಿಂತ ಶ್ರೀಗಂಧದೊಂದಿಗೆ ಜಗಳಾಡುವುದೇ ಲೇಸು. ಹಾಗೆಯೇ ದುರ್ಜನರ ಸಹವಾಸದ್ವಾರಾ ಕೋಟ್ಯಾನುಕೋಟಿ ಸಂಪಾದಿಸಿ ಮೆರೆದರೂ ಜನರು ಎಂದಿಗೂ ಆತನನ್ನು ಮನಸಾರೆ ಗೌರವಿಸಲಾರರು. ಮೈಬಗ್ಗಿಸಿ ದುಡಿದು ಸಂಪಾದಿಸುವವರು ನೆಮ್ಮದಿಯಿಂದ ಗೌರವದಿಂದ ಬದುಕಬಲ್ಲರು. ಸತ್ಪುರುಷರು ಎಂದಿಗೂ ಯಾರನ್ನೂ ವಿನಾಕಾರಣ ಅವಮಾಸಲಾರರು. ಅವಮಾನಿಸಿದರೂ ಅದರಲ್ಲೊಂದು ಸದುದ್ದೇಶವಿರುತ್ತದೆ. ಅದರ ಪರಿಣಾಮ ಒಳ್ಳೆಯದೇ ಆಗುವುದು. ವಸಿಷ್ಠರಿಂದ ಸೋಲಿಸಲ್ಪಟ್ಟ ಕೌಶಿಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಾದನು. ದುರ್ಯೋಧನನಿಂದ ಸಂಮಾನಿಸಲ್ಪಟ್ಟರೂ ಶಲ್ಯನು ತನ್ನ ಸೇನೆಯೊಂದಿಗೆ ನಾಶವಾದನು. ದುರ್ಜನರೊಡನೆ ಮೈತ್ರಿಗಿಂತ ಸಜ್ಜನರೊಡನೆ ಜಗಳ ಲೇಸು.

No comments:

Post a Comment