Friday 22 March 2019

ಸುಭಾಷಿತ - ೬೧

ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ।ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್।।ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ।ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ।।



ಅನ್ವಯ: ನಭಸಃ ಪೂಷಾ ಭೂಷಾ
 ಕಮಲವನಸ್ಯ ಮಧುಕರಃ ಭೂಷಾ
 ವಚಸಃ ಸತ್ಯಂ ಭೂಷಾ
 ವರವಿಭವಸ್ಯ ವಿತರಣಮ್ ಭೂಷಾ
 ಸದಸಃ ಸೂಕ್ತಿಃ ಭೂಷಾ
 ಸಕಲಗುಣಾನಾಂ ಚ ವಿನಯಃ ಭೂಷಾ।


ಭಾವಾರ್ಥ:

 ದಿನವಿಡೀ ಆಕಾಶವು ಮೋಡದಿಂದ ಆವರಿಸಿ ಮಳೆ ಸುರಿಯುತ್ತಿದ್ದರೆ ಮನಸ್ಸಿಗೆ ಮುದವಿಲ್ಲ.
ಪಗಲುಮಿರುಳುಂ ಸುರಿವ ಬಲ್ಸೋನೆಯ ಜಿನುಂಗಿನತ್ತಣಿಂ ಎನ್ನ ಮನಂ ಬೇಸತ್ತುದುಂ. ಏನಾನುಮೊಂದು ನಲ್ಗತೆಯಂ ಪೇಳ ಎನ್ನುತ್ತಾಳೆ ಮುದ್ದಣನ ಮನೋರಮೆ.
ಕತ್ತಲು ಹರಿದು ಆಕಾಶದಲ್ಲಿ ಸೂರ್ಯನು ಬೆಳಗುತ್ತಿದ್ದಂತೆ ಎಲ್ಲೆಡೆ ಲವಲವಿಕೆ ಹರಡಲಾರಂಭಿಸುತ್ತದೆ . ಆಕಾಶಕ್ಕೆ ಸೂರ್ಯನೇ ಭೂಷಣ ರವಿಯಾಕಾಶಕೆ ಭೂಷಣಂ ಅಲ್ಲವೇ!
 ಸರೋವರದಲ್ಲಿ ಅರಳಿದ ತಾವರೆಗಳಿಗೆ ದುಂಬಿಗಳ ನಿನಾದವೇ ಭೂಷಣ. ಬರಿಯು ಅಂದವು ಎಂದಿಗೂ ಶೋಭಿಸದು ನೋಡಿ ಆನಂದಿಸುವ ಮಂದಿ ಇದ್ದಾಗ ಆ ಅಂದವು ಸಾರ್ಥಕವಾಗುತ್ತದೆ. ಮಾತಿಗೆ ಸತ್ಯವೇ ಭೂಷಣ.  ಮಾತಿನಲ್ಲಿ ಸತ್ಯವಿರಬೇಕು ಮನಃಸಾಕ್ಷಿಯನ್ನು ಮೀರದ ನಡತೆಯಿರಬೇಕು. ಅದು ಆತ್ಮೋನ್ನತಿಯ ದಾರಿ.
ಸಂಪತ್ತಿಗೆ ವಿತರಣೆಯೇ ಭೂಷಣ. ಸಿರಿಸಂಪತ್ತು ಎಷ್ಟೇ ಇದ್ದರೂ ಕಟ್ಟಿಟ್ಟಾಗ ಅದಕ್ಕೆ ಬೆಲೆಯಿಲ್ಲ. ಹತ್ತು ಮಂದಿಗಾಗಿ ಅದನ್ನು ವಿನಿಯೋಗಿಸಿದಾಗ ಅವರ ಹರಕೆಯಿಂದ ಸಿಗುವ ಸಂತೋಷ ಜಿಪುಣನಿಗಿಲ್ಲ.
 ಕೈ ಶೋಭಿಸುವುದು ದಾನದಿಂದ, ಚಿನ್ನದ ಕಂಕಣದಿಂದಲ್ಲ. ಚಿನ್ನದ ಕಂಕಣ ತೊಡುವ ಬದಲು ಒಬ್ಬ ಬಡ ವಿದ್ಯಾರ್ಥಿಗೆ ಸಹಾಯ ಮಾಡಿದರೆ ಆತನ ಬದುಕೂ ಸೊಗಸೀತು.
  ಮನಸ್ಸಿಗೆ ಮೈತ್ರಿಯೇ ಭೂಷಣ. ಸಂತೋಷವನ್ನು ಇತರರಿಗೆ ಹಂಚಿದಾಗ ಅದು ದ್ವಿಗುಣವಾಗುತ್ತದೆ. ದುಃಖದಿಂದ ಮನಸ್ಸಿನೊಳಗೇ ಕೊರಗುವ ಬದಲು ಆತ್ಮೀಯರಲ್ಲಿ ಹೇಳಿಕೊಂಡಾಗ ಶಮನವಾಗುತ್ತದೆ.
   ವಸಂತಕಾಲಕ್ಕೆ ಕಾಮನೇ ಭೂಷಣ. ಸಜ್ಜನರ ಸಭೆಗೆ ಸುಸಂಸ್ಕೃತ ಭಾಷಣವೇ ಭೂಷಣ. ಪರರ ದೂಷಣೆ ಮಾಡಲು ಸಭೆ ವೇದಿಕೆಯಲ್ಲ. ಹತ್ತು ಸಮಸ್ತರು ಸೇರಿದಲ್ಲಿ ಮಾತನಾಡುವಾಗ ಎಚ್ಚರವಿರಬೇಕು. ಒಳ್ಳೆಯ ವಿಚಾರಗಳ ಚಿಂತನ ಮಂಥನ ನಡೆದರೆ ಅದು ನಿಜವಾದ ಅರ್ಥದಲ್ಲಿ ಸಭೆ. ಸಂಸ್ಕೃತದಲ್ಲಿ ಸಭಿಕರು ಎಂದರೆ ಜೂಜಾಡುವವರು ಎಂಬ ಅರ್ಥವೂ ಇದೆ. ಪರನಿಂದೆ ಮಾಡುತ್ತಾ ಮೇಜು ಗುದ್ದಿ ಗದ್ದಲ ಕೋಲಾಹಲ ಮಾಡಿದರೆ ಅದು ಆ ಅರ್ಥದಲ್ಲಿ ಸಭೆಯಾದೀತು ಅಷ್ಟೇ. ವಿದ್ಯೆ ಸಂಪತ್ತು ಅಧಿಕಾರ ಏನೇ ಇದ್ದರೂ ಅಹಂಕಾರ ಇದ್ದರೆ ವಿನಯವಿಲ್ಲದಿದ್ದರೆ ಎಲ್ಲಾ ಬಣ್ಣ ಮಸಿ ನುಂಗಿದಂತೆಯೇ. ಎಲ್ಲಾ ಗುಣಗಳಿಗೂ ವಿನಯವೇ ಭೂಷಣ.

No comments:

Post a Comment