Tuesday 12 March 2019

ಸುಭಾಷಿತ - ೫೩

ಪಲಾಯನೈರ್ನಾಪಯಾತಿ ನಿಶ್ಚಲಾ ಭವಿತವ್ಯತಾ।
ದೇಹಿನಃ ಪುಚ್ಛಸಂಲಗ್ನಾ ವಹ್ನಿಜ್ವಾಲೇವ ಪಕ್ಷಿಣಾಮ್।।

ಅನ್ವಯಾರ್ಥ:

 ದೇಹಿನಃ(ಮನುಜರ)
 ನಿಶ್ಚಲಾ(ನಿಶ್ಚಲವಾದ)
 ಭವಿತವ್ಯತಾ(ಭಾಗ್ಯವು/ಕರ್ಮಫಲವು) ಪಲಾಯನೈಃ(ಪಲಾಯನದಿಂದ)
 ನ ಅಪಯಾತಿ(ನಿವಾರಣೆಯಾಗದು)
 ಪಕ್ಷಿಣಾಂ (ಪಕ್ಷಿಗಳ)
 ಪುಚ್ಛಸಂಲಗ್ನಾ (ಬಾಲಕ್ಕೆ ತಗಲಿದ)
 ವಹ್ನಿಜ್ವಾಲಾ ಇವ(ಬೆಂಕಿಯ ಉರಿಯಂತೆ)
 ಸಂಲಗ್ನಾ ಭವತಿ (ಅಂಟಿಕೊಂಡೇ ಇರುತ್ತದೆ)


ಭಾವಾರ್ಥ:

 ಹಕ್ಕಿಯ ಬಾಲಕ್ಕೆ ಹತ್ತಿಕೊಂಡ ಉರಿ ಹಾರಿಹೋದರೆ ಆರಿಹೋದೀತೇ? ಹಕ್ಕಿಯೊಂದಿಗೆ ಬಾಲ, ಬಾಲದೊಂದಿಗೆ ಉರಿ ಬಂದೇ ಬರುತ್ತದೆ. ಮಾಡಿದ ಕರ್ಮದ ಫಲವನ್ನೂ ಅಷ್ಟೇ ತಪ್ಪಿಸಿಕೊಳ್ಳಲಾಗದು.
 ಒಳ್ಳೆಯದೋ ಕೆಟ್ಟದ್ದೋ ಏನೇ ಇದ್ದರೂ ಮಾಡಿದ ಕರ್ಮದ ಫಲವನ್ನು ಅನಭವಿಸಲೇ ಬೇಕು. ಅದೂ ಸಹ ಎರಡನ್ನೂ ಪ್ರತ್ಯೇಕವಾಗಿಯೇ! ಅಷ್ಟು ದೊಡ್ಡ ಧಾರ್ಮಿಕ, ಸಾಕ್ಷಾತ್ ಯಮನ ಪುತ್ರ ಧರ್ಮರಾಯನೇ ಅರ್ಧಸತ್ಯ ನುಡಿದುಕ್ಕಾಗಿ ನರಕದರ್ಶನವಾಯಿತು. ಆ ಸಮಯದಲ್ಲಿ ಇಂದ್ರನು ಯುಧಿಷ್ಠಿರನಿಗೆ ಹೇಳಿದಂತೆ ಪ್ರತಿಯೊಬ್ಬನೂ ನರಕದರ್ಶನ ಮಾಡಲೇಬೇಕು. ಶುಭಕರ್ಮ ಅಶುಭಕರ್ಮಗಳ ರಾಶಿಗಳು ಬೇರೆ ಬೇರೆಯಾಗಿಯೇ ಇರುವವು. ಒಂದನ್ನೊಂದು ನಿವಾರಿಸಲಾರವು. ಮೊದಲು ಪುಣ್ಯದ ಫಲ ಅನುಭವಿಸಿದವನು ಮತ್ತೆ ಪಾಪದ ಫಲ ಅನುಭವಿಸಬೇಕು. ಮೊದಲು ಪಾಪದ ಫಲ ಅನುಭವಿಸಿದವನು ಮತ್ತೆ ಪುಣ್ಯದ ಫಲ ಅನುಭವಿಸಬೇಕು. ಬಾಲಕ್ಕೆ ಹತ್ತಿದ ಬೆಂಕಿಯಂತೆ ಅದು ಹಿಂಬಾಲಿಸಿಯೇ ಸಿದ್ಧ. ಪಲಾಯನಕ್ಕೆ ಅವಕಾಶವೇ ಇಲ್ಲ. ಸ್ವಲ್ಪವೇ ಪಾಪ ಮಾಡಿದವನು ಮೊದಲು ನರಕ ಅನುಭವಿಸಿ ಆಮೇಲೆ ಸ್ವರ್ಗ ಸೇರುತ್ತಾನೆ.  ದ್ರೋಣನ ಕಾರಣವಾಗಿ ಸುಳ್ಳಾಡಿದೆಯಲ್ಲಾ ಅದಕ್ಕಾಗಿ ನಿನಗೆ ನರಕದರ್ಶನವಾಗಿದೆ ಎನ್ನುತ್ತಾನೆ ಇಂದ್ರ. ಪಾಪ ಮಾಡಿದವರು ಮಾಡುತ್ತಲೇ ಇರುವವರು ಸುಖವಾಗಿರುವುದು ಕಣ್ಣಾರೆ ಕಾಣುತ್ತೇವಲ್ಲ ಎಂದರೆ ಅದಕ್ಕೂ ಇಂದ್ರನು ಉತ್ತರವಿದೆ:
ಹೇರಳವಾಗಿ ಪಾಪ ಮಾಡಿದವರು ಮೊದಲು ಸ್ವರ್ಗ ಅನುಭವಿಸಿ ನಂತರ ನರಕ ಸೇರುತ್ತಾರೆ. ಅವರೂ ತಪ್ಪಸಿಕೊಳ್ಳುವಂತಿಲ್ಲ. ಈಗ ಸುಖ ಅನುಭವಿಸಿದವರೂ ನಂತರ ಕಷ್ಟ ಇದ್ದೇ ಇದೆ. ಮನುಷ್ಯನೆಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಪಲಾಯನಗೈಯುವ ಪ್ರಯತ್ನ ಮಾಡದೆ ತಪ್ಪು ಒಪ್ಪನ್ನು ವಿವೇಚಿಸಿ ಭಗವಂತನ ತಕ್ಕಡಿಯಲ್ಲಿ ಪುಣ್ಯದ ತೂಕವನ್ನು ಹೆಚ್ಚಿಸಿಕೊಳ್ಳುವವನೇ ವಿವೇಕಿ. 

No comments:

Post a Comment