Thursday 7 March 2019

ಸುಭಾಷಿತ - ೫೦

ನ ಸೀದನ್ನಪಿ ಚ ಧರ್ಮೇಣ ಮನೋಽಧರ್ಮೇ ನಿವೇಶಯೇತ್।ಅಧಾರ್ಮಿಕಾಣಾಂ ಪಾಪಾನಾಮಾಶು ಪಶ್ಯನ್ವಿಪರ್ಯಯಮ್॥
             (ಮನು ಸ್ಮೃತಿ)

ಅನ್ವಯಾರ್ಥ:


ಅಧಾರ್ಮಿಕಣಾಮ್(ಅಧರ್ಮಿಗಳಿಗೆ)
 ಪಾಪಾನಾಂ(ಪಾಪಿಗಳಿಗೆ )
 ಆಶು ವಿಪರ್ಯಯಂ(ಕೂಡಲೇ ಒದಗುವ ದುರ್ಗತಿಯನ್ನು)   ಪಶ್ಯನ್(ನೋಡಿ)
 ಧರ್ಮೇಣ (ಧರ್ಮದ ಕಾರಣದಿಂದ)
 ಸೀದನ್ ಅಪಿ (ಕಷ್ಟಕ್ಕೊಳಗಾಗಿದ್ದರೂ)   ಅಧರ್ಮೇ(ಅಧರ್ಮದಲ್ಲಿ)
 ಮನಃ(ಮನಸ್ಸನ್ನು)
 ನ ನಿವೇಶಯೇತ್(ತೊಡಗಿಸಿಕೊಳ್ಳಬಾರದು)


ಭಾವಾರ್ಥ:

 ಧರ್ಮದ ದಾರಿ ಯಾವಾಗಲೂ ಅಧರ್ಮದ ದಾರಿಯಷ್ಟು ಸುಗಮವೂ ಅಲ್ಲ ಆಕರ್ಷಕವೂ ಅಲ್ಲ. ಆದರೆ ಪರಿಣಾಮ ನೋಡಿದರೆ ಧರ್ಮವೇ ಆಕರ್ಷಕ. ಅಧರ್ಮದ ಪರಿಣಾಮ ಭೀಕರ. ಅಂಗಡಿಯಲ್ಲಿ ದೊರೆಯುವ ತಿಂಡಿ ರುಚಿಕರವೇನೋ ಹೌದು ಆದರೆ ಮುಂದೆ ಬರುವ ಅನಾರೋಗ್ಯದ ವೇದನೆ ನೆನೆದರೆ ಮನೆಯಲ್ಲಿ ಅಮ್ಮ ಮಾಡಿದ ತಿಂಡಿಯೇ ಆಗಬಹುದು ಎನಿಸುವುದಿಲ್ಲವೇ? ಸೃಷ್ಟಿಯಲ್ಲಿ ಪ್ರತಿಯೊಬ್ಬನಿಗೂ ಕಷ್ಟವಿದೆ. ಕಷ್ಟ ಬಂದಾಗ ವಿಚಲಿತರಾಗುವುದೂ ಸಹಜವೇ. ಆದರೆ ಕ್ಷಣಕಾಲ ವಿವೇಕಕ್ಕೆ ಮನಸ್ಸು ಕೊಟ್ಟರೆ ಅದುವೇ ದಾರಿ ತೋರಿಸುತ್ತದೆ. ಸುತ್ತುಮುತ್ತಲಿನ ಅಧಾರ್ಮಿಕರನ್ನು ಕಂಡಾಗ ಅವರ ಧನದೌಲತ್ತು ನಮಗೂ ಇರಬೇಕಿತ್ತು ಎನಿಸಿದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಮೂಡುತ್ತದೆಯೇ? ಆ ದೌಲತ್ತು ತೀರಾ ಕ್ಷಣಿಕ. ಕಾನೂನಿನ ಕೈಗೆ ಸಿಕ್ಕಿ ಶಿಕ್ಷೆಗೊಳಗಾಗಿ ಮಾನ ಹರಾಜಾಗುವುದನ್ನು ನೋಡುವಾಗ ಆ ಸಂಪತ್ತೂ ಬೇಡ ಅದರ ಸುಖವೂ ಬೇಡ ಅನ್ನಿಸುವುದಿಲ್ಲವೇ? ಯಾವಾಗಲೂ ಹಾಗೆಯೇ ಕೆಟ್ಟದ್ದಕ್ಕಿರುವ ಆಕರ್ಷಣೆ ಒಳ್ಳೆಯದಕ್ಕಿಲ್ಲ. ಹೊಟ್ಟೆ ಬಿರಿಯುವಂತೆ ತಿಂದು ಕಾಲು ಚಾಚಿ ಮಲಗಿ ನಿದ್ರಿಸುವ ಸುಖ ಮಿತವಾಗಿ ತಿಂದು ಚೆನ್ನಾಗಿ ದುಡಿಯುವವನಿಗಿಲ್ಲ ನಿಜ. ಆದರೆ ಮುಂದೆ ಬೊಜ್ಜು ಬಂದು ಮನೆಯೊಳಗೆ ನಡೆಯುವಾಗಲೂ ಏದುಸಿರು ಬಿಡುವವನ ಕಷ್ಟ ದುಡಿಯುವವನಿಗೆ ಇಲ್ಲ. ಧರ್ಮದಿಂದ ಕಷ್ಟ ಅಧರ್ಮದಿಂದ ಸುಖ ಎಂದು ಮೇಲ್ನೋಟಕ್ಕೆ ಅನಿಸಿದರೂ ಧಾರ್ಮಿಕರಿಗಿರುವ ನೆಮ್ಮದಿ ಸಮಾಜದಲ್ಲಿ ಸಿಗುವ ಗೌರವಗಳನ್ನು ಗಮನಿಸಿ ಎಷ್ಟೇ ಕಷ್ಟ ಬಂದರೂ ಅಧರ್ಮದ ದಾರಿಯನ್ನು ತುಳಿಯದಿರುವ ಮಸಃಸ್ಥೈರ್ಯವನ್ನು ಕೊಡು ಎಂದು ಭಗವಂತನನ್ನು ಪ್ರಾರ್ಥಿಸೋಣ.

No comments:

Post a Comment