Thursday 7 March 2019

ಸುಭಾಷಿತ - ೫೧

ಘಟ್ಟನಪ್ರತಿಭಾಃ ಕೇಚಿತ್ಕೇಚಿದ್ಘಟ್ಟನನಿಸ್ಪೃಹಾಃ।
ಘಟದೀಪಪ್ರಭಾಃ ಕೇಚಿತ್ಕೇಚಿದಾಕಾಶಸನ್ನಿಭಾಃ॥

ಅನ್ವಯಾರ್ಥ:

 ಕೇಚಿತ್ (ಕೆಲವು ಜನರು)
 ಘಟ್ಟನಪ್ರತಿಭಾಃ (ಪ್ರಚೋದನೆಯಿಂದ ಬೆಳಗುವವರು)   ಕೇಚಿತ್(ಕೆಲವರು)
 ಘಟ್ಟನನಿಸ್ಪೃಹಾಃ (ಪ್ರಚೋದನೆಯಿಂದ ಬದಲಾಗದವರು)   ಕೇಚಿತ್ (ಕೆಲವರು )
 ಘಟದೀಪಪ್ರಭಾಃ (ಮಡಕೆಯೊಳಗಿನ ದೀಪದಂಥವರು)   ಕೇಚಿದಾಕಾಶಸನ್ನಿಭಾಃ(ಆಕಾಶದಂತೆ ಬೆಳಗುವವರು)

ಭಾವಾರ್ಥ:

ಪ್ರತಿಭೆ ಎಲ್ಲರಲ್ಲೂ ಇದೆ. ಕೆಲವರಲ್ಲಿ ಹೆಚ್ಚು ಕೆಲವರಲ್ಲಿ ಸ್ವಲ್ಪ ಕಡಿಮೆ. ಒಬ್ಬೊಬ್ಬರು ಒಂದೊಂದರಲ್ಲಿ ನಿಸ್ಸೀಮರು. ಕೆಲವರಿಗೆ ಅವರ ಪ್ರತಿಭೆಯ ಅರಿವೇ ಇರುವುದಿಲ್ಲ.ಅದು ಕೀಳರಿಮೆಯಿಂದಲೋ ಉದಾಸಭಾವದಿಂದಲೋ ಕಮರಿ ಹೋಗುವುದು. ಅವರನ್ನು ಒಮ್ಮೆ ಪ್ರೋತ್ಸಾಹಿಸಿ ಹೊರತಂದರೆ ಬೆಳಗುತ್ತಾರೆ. ಕೆಲವರದು ಸದಾ ಪ್ರೋತ್ಸಾಹವನ್ನೇ ಬಯಸುವ ಪ್ರತಿಭೆ. ಅವರೂ ಘಟ್ಟನಪ್ರತಿಭರೇ. ಅವರು ತಾವಾಗಿಯೇ ಬೆಳಗಬಲ್ಲರು. ಆದರೂ ಪ್ರೋತ್ಸಾಹ ಬಯಸುವ ಮನೋಗುಣ ಅವರದು. ಅದು ಪರಾವಲಂಬಿತ ಪ್ರತಿಭೆ. ಕೆಲವರಲ್ಲಿ ನಿವಾರಿಸಲಾಗದಂತಹ ಜಡತ್ವವು ಪ್ರತಿಭೆಯನ್ನು ಆವರಿಸಿರಬಹುದು. ಎಷ್ಟೇ ಪ್ರಚೋದಿಸಿದರೂ ಅಂಥವರು ಮುಂಬರುವವರಲ್ಲ. ಪ್ರೋತ್ಸಾಹದ ಪ್ರಯತ್ನ ಅಲ್ಲಿ ವ್ಯರ್ಥ. ಇನ್ನು ಕೆಲವರು ಘಟದೀಪಪ್ರಭರು. ಅವರಲ್ಲಿ ಸ್ವಯಂಪ್ರಭೆ ಇದೆ. ಆದರೆ ಹೊರಬರುವುದನ್ನು ಅವರೇ ಬಯಸುವುದಿಲ್ಲ. ಮಡಕೆಯೊಳಗಿನ ದೀಪದಂತೆ, ಒಳಗೆ ಸಾಕಷ್ಟು ಬೆಳಕಿದೆ. ಆದರೆ ಲೋಕಕ್ಕೆ ಕಾಣಿಸುವಂತಿಲ್ಲ. ಯಾವುದೇ ಪ್ರಚೋದನೆ ಪ್ರಚಾರ ಬಯಸದ ಅವರಿಂದ ಲೋಕಕ್ಕೇನೂ ಲಾಭವೂ ಇಲ್ಲ ಹಾನಿಯೂ ಇಲ್ಲ. ನಾಲ್ಕನೆಯ ವರ್ಗ ಲೋಕಹಿತಕಾರಕ. ಸೂರ್ಯಚಂದ್ರರಿಂದ ಬೆಳಗುವ ಆಕಾಶದಂತೆ ತಮ್ಮ ಸ್ವಯಂಪ್ರಭೆಯಿಂದ ತಾವೂ ಬೆಳಗಿ ಲೋಕವನ್ನೂ ಬೆಳಗುವವರು. ಯಾವ ಪ್ರೋತ್ಸಾಹವೋ ಪ್ರಚೋದನೆಯೋ ಪ್ರಚಾರವೋ ಅವರಿಗೆ ಬೇಡವೇ ಬೇಡ. ಆಚಾರ್ಯ ಶಂಕರರು ಸ್ವಾಮಿ ವಿವೇಕಾನಂದರೇ ಮೊದಲಾದ ಮಹಾತ್ಮರು ಇತರರಿಗೆ ಆಧಾರವಾಗಿ ಲೋಕಕಲ್ಯಾಣಕಾರಕರಾಗಿರುತ್ತಾರೆ.            

No comments:

Post a Comment