Tuesday 5 March 2019

ಸುಭಾಷಿತ - ೪೯

ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತ್ರಾ ಭಾರ್ಯಾ ತಥೈವ ಚ।
ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧ್ರುವಮ್॥



ಅನ್ವಯಾರ್ಥ:

 ಯಸ್ಮಿನ್ ಕುಲೇ(ಯಾವ ಸಂಸಾರದಲ್ಲಿ) ಭಾರ್ಯಯಾ(ಹೆಂಡತಿಯಿಂದ)
 ಭರ್ತಾ(ಗಂಡನು)
 ಸಂತುಷ್ಟಃ(ಸಂತೋಷ ಹೊಂದುತ್ತಾನೋ)
 ತಥಾ ಏವ ಚ(ಹಾಗೆಯೇ)
 ಭರ್ತ್ರಾ(ಗಂಡನಿಂದ)
 ಭಾರ್ಯಾ ( ಹೆಂಡತಿಯು)
 (ಸಂತುಷ್ಟಾ ಭವತಿ ಸಂತೋಷ ಪಡುತ್ತಾಳೋ)
 ತತ್ರ (ಅಲ್ಲಿ)
 ಕಲ್ಯಾಣಂ (ಶ್ರೇಯಸ್ಸು)
 ಧ್ರುವಮ್ (ನಿಶ್ಚಿತವು).


ಭಾವಾರ್ಥ:

  ಹಿತವಾದ ಜೀವನಕ್ಕೆ ಕಾರಣವಾದದ್ದು ಕಲ್ಯಾಣ. ಪ್ರಿಯವಾದದ್ದು ಪ್ರೇಯಸ್ಸು ಹಿತವಾದದ್ದು ಶ್ರೇಯಸ್ಸು ಪ್ರಿಯವಾದುದೆಲ್ಲವೂ ಹಿತವಾಗರದು. ಹಿತವಾದುದರಲ್ಲಿ ಪ್ರೀತಿ ಬೆಳೆಸಿಕೊಂಡಾಗ ಪ್ರೇಯಸ್ಸು ಶ್ರೇಯಸ್ಸಿಗೆ ಕಾರಣವಾಗುತ್ತದೆ. ವಿವಾಹದಿಂದ ಗೃಹಸ್ಥಾಶ್ರಮವನ್ನು ಸೇರಿ ಧರ್ಮಪ್ರಜಾಸಂಪತ್ತುಗಳನ್ನು ಸಿದ್ಧಿಸಿಕೊಂಡು ಸಾರ್ಥಕ ಬದುಕು ಬಾಳಬೇಕು. ಧರ್ಮ ಅರ್ಥ ಕಾಮಗಳನ್ನು ಹೊಂದಿ ಮೋಕ್ಷ ಸಾಧಿಸುವುದೇ ಶ್ರೇಯಸ್ಸು. ಆ ಕಾರಣದಿಂದಲೇ ವಿವಾಹವು ಕಲ್ಯಾಣವೆಂದು ಕರೆಯಲ್ಪಡುತ್ತದೆ. ಪತ್ನಿಯಿಂದ ಪತಿಯು ಸಂತುಷ್ಟನಾಗಬೇಕು. ಹಾಗೆಯೇ ಪತಿಯಿಂದ ಪತ್ನಿಯೂ ಸಂತೃಪ್ತಳಾಗಬೇಕು. ಪುರುಷಪ್ರಾಧಾನ್ಯತೆ ಸ್ತ್ರೀಸ್ವಾತಂತ್ರ್ಯ ಎಲ್ಲವೂ ಅರ್ಥಹೀನ ವಾದಗಳು. ಎರಡೂ ಚಕ್ರಗಳೂ ಸಮಾನವಾಗಿ ಚಲಿಸಿದಾಗ ಮಾತ್ರ ರಥವು ಸರಾಗವಾಗಿ ಚಲಿಸೀತು. ಸರಿಯಾದ ರೀತಿಯಲ್ಲಿ ಸಾಗಿದರೆ ಅದು ಸಂಸಾರ. ಸರಾಗವಾಗಿ ಸಾಗಬೇಕಾದರೆ ಆ ಸಂಸಾರವು ಸ+ರಾಗ (ಪ್ರೀತಿಯಿಂದ ಕೂಡಿದ್ದು) ಆಗಿರಬೇಕು. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಅನುನಯಿಸಿಕೊಂಡು ಪರಸ್ಪರ ಸಂತೃಪ್ತಿ ಹೊಂದುವ ದಂಪತಿಗಳ ಕುಟುಂಬದಲ್ಲಿ ಕಲ್ಯಾಣ(ಶ್ರೇಯಸ್ಸು) ಶಾಶ್ವತವಾಗಿರುತ್ತದೆ.

No comments:

Post a Comment