Tuesday 19 March 2019

ಸುಭಾಷಿತ - ೫೬

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನಮ್।ವನೇ ವಾಸಃ ಕಂದೈರಶನಮಪಿ ದುಃಸ್ಥಂ ವಪುರಿದಮ್।। ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ।
ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ।।


ಅನ್ವಯಾರ್ಥ:

 ಜನ್ಮಸ್ಥಾನಂ (ಹುಟ್ಟಿದ ಸ್ಥಳ)
 ಘಟಃ (ಮಡಕೆ)
 ಮೃಗಪರಿಜನಃ (ಸುತ್ತಲೂ ಇದ್ದ ಪರಿವಾರ ಜಿಂಕೆಯೇ ಮೊದಲಾದ ಪ್ರಾಣಿಗಳು)
 ಭೂರ್ಜವಸನಮ್(ಭೂರ್ಜಪತ್ರಗಳೇ ಬಟ್ಟೆ)
 ವನೇ (ಕಾಡಿನಲ್ಲಿ)
 ವಾಸಃ(ವಾಸ)
 ಕಂದೈಃ ಅಶನಮ್(ಕಂದಮೂಲಗಳಿಂದ ಆಹಾರ)
ಇದಂ ವಪುಃ ದುಃಸ್ಥಂ(ಈ ಶರೀರವೂ ಸ್ಥಿರವಾದ್ದಲ್ಲ)
(ತಥಾಪಿ)(ಹಾಗಾದರೂ)
 ಯದ್(ಹೇಗೆ)
 ಅಗಸ್ತ್ಯಃ (ಅಗಸ್ತ್ಯನು)
ಪಾಥೋಧಿಂ (ಸಮುದ್ರವನ್ನು)
 ಕರಾಂಭೋಜಕುಹರೇ ಅಕೃತ( ಬೊಗಸೆಯಲ್ಲಿ) ಹಿಡಿದನೋ ಹಾಗೆಯೇ )
 ಮಹತಾಂ(ಶ್ರೇಷ್ಠರ)
 ಕ್ರಿಯಾಸಿದ್ಧಿಃ (ಕಾರ್ಯಸಾಧನೆಯು)
ಸತ್ವೇ ಭವತಿ (ಅಂತಃಸತ್ವದ ಸಾಮರ್ಥ್ಯದಿಂದಲೇ ಆಗುತ್ತದೆ.)
 ನ ಉಪಕರಣೇ(ಸಾಧನ ಸಲಕರಣೆಗಳಿಂದಲ್ಲ)

ಭಾವಾರ್ಥ:

ಕ್ರಿಯಾಸಿದ್ಧಿಗೋಸ್ಕರ ಮಹಾತ್ಮರು ಉಪಕರಣಕ್ಕಾಗಿ ಕಾಯುವುದಿಲ್ಲ. ಅಂತಃಸತ್ವವೇ ಅವರಿಗೆ ಸಾಧನ. . ಅಗಸ್ತ್ಯಮಹರ್ಷಿ ಹುಟ್ಟಿದ್ದು ಕಾಡಿನಲ್ಲಿ ಒಂದು ಕೊಡದಲ್ಲಿ. ಸಹವಾಸ ಅಲ್ಲಿನ ಮೃಗಪಕ್ಷಿಗಳೊಂದಿಗೆ. ಬಟ್ಟೆಯ ನಾರುಮಡಿ ವಾಸಕ್ಕೆ ಕಾಡಿನ ಎಲೆಮನೆ. ಆಹಾರ ಗಡ್ಡೆಗೆಣಸು. ಶರೀರವೋ ಆ ಸಾಗರದ ಮುಂದೆ ಏನೂ ಅಲ್ಲ. ಹಾಗಿದ್ದರೂ ಆ ಮಹಾಸಾಗರವನ್ನೇ ಬೊಗಸೆಯಲ್ಲಿ ಹಿಡಿದು ಆಪೋಶನಗೈದ!! ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆಯಿದೆ. ಸಾಧಿಸಬೇಕೆಂಬ ಛಲವಿದ್ದರೆ ಸಲಕರಣೆಯಿಲ್ಲ ಎಂಬ ನೆವನ ಬೇಡ. ಸಾರಥಿಯಿದ್ದಿದ್ದರೆ ಕೌರವಸೈನ್ಯವನ್ನೆಲ್ಲಾ ಧ್ವಂಸಮಾಡಿ ಬಿಡುತ್ತಿದ್ದೆ ಎಂದ ಉತ್ತರಕುಮಾರನಂತೆ ಪೌರುಷ ಕೊಚ್ಚುವುದರಿಂದ ಕಾರ್ಯ ಸಾಗದು. ಅದಕ್ಕೆ ಸಾಮರ್ಥ್ಯ ಬೇಕು ಉಪಕರಣ ಎಂದಿಗೂ ಮುಖ್ಯವಲ್ಲ. ಮಾಡಿಯೇ ಮಾಡುತ್ತೇನೆಂಬ ಮಹತ್ತಾದ ಇಚ್ಛೆ, ಮಾಡುವ ಸಾಮರ್ಥ್ಯ, ದೃಢನಿಶ್ಚಯ, ಸತತ ಪ್ರಯತ್ನ ಇರಬೇಕು. ಮಾಡುತ್ತಾ ಹೋದಂತೆ ಅನುಭವ, ಜ್ಞಾನ ತಾನಾಗಿಯೇ ಬರುತ್ತದೆ, ಸಾಮರ್ಥ್ಯ ಹೆಚ್ಚುತ್ತದೆ. ಇಚ್ಛೆಯಿಂದ ಕ್ರಿಯೆ ಅದರಿಂದ ಜ್ಞಾನ ಆ ಮೂಲಕ ಸಾಮರ್ಥ್ಯ ಮತ್ತು ಸಾಧನೆ. ಅದರಿಂದ ಇಚ್ಛಾಶಕ್ತಿಕ್ರಿಯಾಶಕ್ತಿಜ್ಞಾನಶಕ್ತಿಸ್ವರೂಪಿಣಿಯಾದ ಮಹಾಮಾತೆಯ ಅನುಗ್ರಹ!! ಅಲ್ಪಸ್ವಲ್ಪವೇ ಆಗಲಿ ಮಾಡುತ್ತಾ ಹೋದಂತೆ ನಿಧಾನವಾಗಿಯಾದರೂ ಕಾರ್ಯಸಾಧನೆ ನಿಶ್ಚಿತ. ಸಿದ್ಧಿಯ ಸತ್ವ ಅಂತರಂಗದಲ್ಲಿ ಉದಿಸಬೇಕು ಅಷ್ಟೇ.
 ಹಾರಿ ಹೋಗಲು ಬಲವಾದ ರೆಕ್ಕೆಪುಕ್ಕಗಳಿಲ್ಲದಿದ್ದರೂ ಸದಾ ಸಾಗುತ್ತಿರುವ ಇರುವೆ ನೂರಾರು ಮೈಲಿ ದೂರ ತಲುಪಬಲ್ಲುದು. ಆ ಶಕ್ತಿ ಸತ್ತ್ವ ಅದಕ್ಕೂ ಇದೆ. ಸುಮ್ಮನಿದ್ದರೆ ವಾಯುವೇಗದ ಸಾಮರ್ಥವಿರುವ ಗರುಡನೂ ಕೂಡಾ ಗೇಣುದೂರದ ಗುರಿಯನ್ನೂ ಸೇರಲಾರ. ಮಾನಸಿಕ ಶಾರೀರಿಕ ಸತ್ವ ಸಾಮರ್ಥ್ಯವುಳ್ಳವನಿಗೆ ಸಲಕರಣೆ ಕೇವಲ ಸಹಾಯಕ್ಕಾಗಿ ಮಾತ್ರ. ಸಲಕರಣೆ ಇಲ್ಲದಿರುವುದು ಕಾರ್ಯಸಾಧನೆಗೆ ಅಡ್ಡಿಯಾಗದು.

No comments:

Post a Comment