Tuesday 19 March 2019

ಸುಭಾಷಿತ - ೫೭

ಅಭಿಯುಕ್ತಂ ಬಲವತಾ ದುರ್ಬಲಂ ಹೀನಸಾಧನಮ್।
ಹೃತಸ್ವಂ ಕಾಮಿನಂ ಚೋರಮಾವಿಶಂತಿ ಪ್ರಜಾಗರಾಃ।
                                                   (ವಿದುರ ನೀತಿ)


ಅನ್ವಯಾರ್ಥ:

 ಬಲವತಾ ಅಭಿಯುಕ್ತಂ (ಬಲಶಾಲಿಗಳಾದ ಇತರರಿಂದ ವಿರೋಧಿಸಲ್ಪಟ್ಟವನನ್ನು)
 ದುರ್ಬಲಂ (ಬಲಹೀನನನ್ನು)
 ಹೀನಸಾಧನಂ (ಸಾಧನ/ಸಾಧನೆ ಕಳಕೊಂಡವನನ್ನು)
 ಹೃತಸ್ವಂ (ತನ್ನದನ್ನು/ತನ್ನತನವನ್ನು ಕಳಕೊಂಡವನನ್ನು)
ಕಾಮಿನಂ (ಕಾಮಾತುರನನ್ನು)
 ಚೋರಂ (ಕಳ್ಳನನ್ನು)
ಪ್ರಜಾಗರಾಃ (ನಿದ್ರಾಹೀನತೆಯ ರೋಗಗಳು)
 ಆವಿಶಂತಿ (ಪ್ರವೇಶಿಸುತ್ತವೆ)


ಭಾವಾರ್ಥ:

ಜೀವಿಗಳಿಗೆ ಆಹಾರವು ಎಷ್ಟು ಅವಶ್ಯವೋ ನಿದ್ರೆಯೂ ಅಷ್ಟೇ ಅವಶ್ಯಕ. ಮನಸ್ಸನ್ನು ಭಯವೋ ಹತಾಶೆಯೋ ಬಯಕೆಯೋ ಯಾವುದೇ ಆದರೂ ಬಲವಾಗಿ ಆವರಿಸಿದರೆ ನಿದ್ರೆ ದೂರವಾಗುತ್ತದೆ. ಆರ್ಥಿಕವಾಗಿಯೋ ಶಾರೀರಿಕವಾಗಿಯೋ ಅಧಿಕಾರದಿಂದಲೋ ಬಲಶಾಲಿಗಳಾಗಿರುವವರ ವಿರೋಧವನ್ನು ಕಟ್ಟಿಕೊಂಡವನು ಯಾವಾಗ ಅವರಿಂದ ಆಘಾತಕ್ಕೊಳಗಾದೇನೋ ಎಂಬ ಭಯದಿಂದಲೇ ಬದುಕಬೇಕಾಗುತ್ತದೆ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ದುರ್ಬಲನಾದರಂತೂ ಸದಾ ಭಯವೇ. ನಿದ್ರೆ ಅವರ ಬಳಿ ಸುಳಿಯದು. ಏನಾದರೂ ಸಾಧಿಸಲೇಬೇಕೆಂದ ಹೊರಟವನಿಗೆ ಸಾಧನೆ ಪೂರ್ತಿಯಾಗುವವರೆಗೂ ನಿದ್ದೆಯಿಲ್ಲ. ಪ್ರಿಯವಾದ ಅಥವಾ ಅವಶ್ಯವಾದ ಸಾಧನಗಳನ್ನು ಕಳಕೊಂಡವನಿಗೂ ಸದಾ ಜಾಗರಣೆಯೇ. ದೈವವಶಾತ್ ಅಥವಾ ಸ್ವಪ್ರಮಾದದಿಂದ ತನ್ನ ಆಸ್ತಿಪಾಸ್ತಿ, ಧನ, ಸಂಬಂಧಿಕರುಗಳನ್ನು ಕಳೆದುಕೊಂಡ ವ್ಯಕ್ತಿಯು ತನಗೆ ಒದಗಿ ಬಂದ ದಾರಿದ್ರ್ಯವನ್ನು ನೆನೆಸಿಕೊಳ್ಳುತ್ತ ನಿದ್ದೆಯನ್ನು ಕಳೆದುಕೊಳ್ಳುತ್ತಾನೆ. ಕಾಮಾತುರನಿಗೆ ನಿದ್ದೆಯಿಲ್ಲ. ನಿದ್ದೆಯ ಗೊಡವೆಯೂ ಇಲ್ಲ ಕಳ್ಳರ ವೃತ್ತಿ ಆರಂಭವಾಗುವುದೇ ಎಲ್ಲರೂ ನಿದ್ರಿಸಿರುವಾಗ. ರಾತ್ರಿಯಿಡಿ ಎಚ್ಚರವಾಗಿದ್ದು ಕಳ್ಳತನ ಮಾಡುವುದು. ಒಟ್ಟಿನಲ್ಲಿ ಕಾಮ ಕ್ರೋಧ ಮೋಹ ಇತರರಲ್ಲಿ ವೈರ ದ್ವೇಷ ಧನದಾಹವೇ ಮೊದಲಾವುಗಳೇ ನಿದ್ರಾನಾಶಕ್ಕೆ ಕಾರಣ. ಅವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇದ್ದವನಿಗೆ ಸುಖನಿದ್ರೆ ಆ ಮೂಲಕ ಆರೋಗ್ಯ ಭಾಗ್ಯ.

No comments:

Post a Comment