Tuesday 26 February 2019

ಸುಭಾಷಿತ  ೪೭


ಏಕೋಽಹಮಸಹಾಯೋಽಹಂ ಕೃಶೋಽಹಮಪರಿಚ್ಛದಃ।
ಸ್ವಪ್ನೇಽಪ್ಯೇವಂವಿಧಾ ಚಿಂತಾ ಮೃಗೇಂದ್ರಸ್ಯ ನ ಜಾಯತೇ।।


ಅನ್ವಯಾರ್ಥ:

 ಅಹಂ ಏಕಃ (ನಾನು ಏಕಾಕಿ)
 ಅಹಂ ಅಸಹಾಯಃ (ನಾನು ನಿಸ್ಸಹಾಯಕ)
 ಅಹಂ ಕೃಶಃ (ನಾನು ದರ್ಬಲ)
 ಅಹಂ ಅಪರಿಚ್ಛದಃ (ನಾನು ಅನಾಥ)
 ಏವಂವಿಧಾ (ಈ ರೀತಿಯ)
 ಚಿಂತಾ (ಯೋಚನೆಯು)
 ಮೃಗೇಂದ್ರಸ್ಯ (ಸಿಂಹಕ್ಕೆ)
 ಸ್ವಪ್ನೇ ಅಪಿ (ಕನಸಿನಲ್ಲೂ ಕೂಡಾ)
 ನ ಜಾಯತೇ (ಉಂಟಾಗುವುದಿಲ್ಲ)

ಭಾವಾರ್ಥ:

 ಸಮರ್ಥನು ಎನ್ನಿಸಿಕೊಳ್ಳಲು ಬಲ ಬುದ್ಧಿಮತ್ತೆ ಎಷ್ಟು ಮುಖ್ಯವೋ ಆತ್ಮವಿಶ್ವಾಸ ಅದಕ್ಕಿಂತಲೂ ಹೆಚ್ಚು ಮುಖ್ಯ. ನಾನು ಒಂಟಿ, ದುರ್ಬಲ , ಅನಾಥ, ಯಾರ ಸಹಾಯವೂ ಇಲ್ಲದೆ ಏನು ತಾನೇ ಮಾಡಬಲ್ಲೆ! ಎಂದು ಸಿಂಹವು ಎಂದೂ ಕೀಳರಿಮೆ ಹೊಂದುವುದಿಲ್ಲ. ಆನೆಗಳ ಶಾರೀರಿಕ ಬಲ ಸಿಂಹಕ್ಕಿಲ್ಲ. ಸಂಖ್ಯೆಯೂ ಆನೆಗಳಿಗಿಂತ ಎಷ್ಟೋ ಕಡಿಮೆ. ಆದರೇನು ಹಿಂಡು ಹಿಂಡೇ ಬಂದರೂ ಹೆದರದೆ ಮದಿಸಿದ ಆನೆಯ ಕುಂಭಸ್ಥಲವನ್ನೇ ಬಗೆಯುವ ಸಾಮರ್ಥ್ಯಕ್ಕೆ ಕಾರಣ ಅದರ ಆತ್ಮವಿಶ್ವಾಸ. ದ್ರೋಣ, ಕರ್ಣ, ಬೃಹದ್ಬಲ, ಭೂರಿಶ್ರವ, ಶಲ್ಯ, ಅಶ್ವತ್ಥಾಮ ದುರ್ಯೋಧನ ದುಶ್ಶಾಸನರೇ ಮೊದಲಾದ ಅತಿರಥ ಮಹಾರಥರು ಏಕಕಾಲದಲ್ಲಿ ಸುತ್ತುವರಿದು ಬಾಣಪ್ರಯೋಗ ಮಾಡುತ್ತಿದ್ದರೂ ಏಕಾಕಿ ಅಭಿಮನ್ಯು ಅವರನ್ನು ಎದುರಿಸಿ ಹೋರಾಡುತ್ತಿದ್ದರೆ ಬಿಲ್ಲು ಹಿಡಿದು ನೃತ್ಯ ಮಾಡುತ್ತಿರುವಂತೆ ತೋರುತ್ತಿತ್ತು. ಕಲ್ಪನೆಗೂ ನಿಲುಕದ ಆ ಮಹಾಸಾಹಸಕ್ಕೆ ಆತನ ಸಾಮರ್ಥ್ಯವಷ್ಟೇ ಕಾರಣವಲ್ಲ. ಆತ್ಮವಿಶ್ವಾಸವೆಂದರೆ ಅದು!! ಯುದ್ಧೋತ್ಸಾಹದಲ್ಲಿ ಮುನ್ನುಗ್ಗುವ ನನಗೆ ಐರಾವತವನ್ನೇರಿ ಸುರಗಣದೊಂದಿಗೆ ಬರುವ ಇಂದ್ರನೂ ಗಣನೆಗಿಲ್ಲ ಎಂಬ ದೃಢವಿಶ್ವಾಸವೇ ಅಷ್ಟು ಜನರನ್ನೆದುರಿಸುವ ಶಕ್ತಿ ನೀಡಿದೆ. ನಾನು ಒಂಟಿ ಅಸಹಾಯಕ ಎಂಬ ಭಾವನೆ ಕ್ಷಣಕಾಲವೂ ಬಾರದೆ ಮುನ್ನುಗ್ಗಿದರೆ ಸಿಂಹಬಲವು ತಾನಾಗಿಯೇ ಬರುವುದು.

No comments:

Post a Comment