Monday 11 February 2019

 ಸುಭಾಷಿತ ೨೪


ಪರನಿಂದಾಸು ಪಾಂಡಿತ್ಯಂ ಸ್ವೇಷು ಕಾರ್ಯೇಷ್ವನುದ್ಯಮಃ।   ಪ್ರದ್ವೇಷಶ್ಚ ಗುಣಜ್ಞೇಷು ಪಂಥಾನೋ ಹ್ಯಾಪದಾಂ ತ್ರಯಃ॥

    ಅನ್ವಯ ಅರ್ಥ:


 ಪರನಿಂದಾಸು (ಇತರರನ್ನು ದೂರುವುದರಲ್ಲಿ)
 ಪಾಂಡಿತ್ಯಂ (ನಿಪುಣನಾಗಿರುವುದು)
 ಸ್ವೇಷು ಕಾರ್ಯೇಷು (ತನ್ನ ಕೆಲಸಗಳಲ್ಲಿ)   ಅನುದ್ಯಮಃ(ತೊಡಗದಿರುವುದು)
 ಗುಣಜ್ಞೇಷು(ಜ್ಞಾನಿಗಳಲ್ಲಿ)
 ಪ್ರದ್ವೇಷಃ(ಅತಿ ದ್ವೇಷ ಹೊಂದಿರುವುದು)
 (ಏತೇ) ತ್ರಯಃ(ಈ ಮೂರು)
 ಆಪದಾಂ ಪಂಥಾನಃ(ಆಪತ್ತುಗಳಿಗೆ ದಾರಿಗಳು)


 ಭಾವಾರ್ಥ:

 ಇತರರು ಮಾಡುವ ಒಳ್ಳೆಯ ಕೆಲಸವನ್ನು ಮೆಚ್ಚಿ ಪ್ರೋತ್ಸಾಹ ನೀಡಬೇಕು. ಅಷ್ಟು ಮಾಡುವ ಮನಸ್ಸಿಲ್ದಿದ್ದರೆ ಸುಮ್ಮನಾದರೂ ಇರಬೇಕು. ಅದು ಬಿಟ್ಟು ಎಲ್ಲದರಲ್ಲೂ ದೋಷ ಹುಡುಕುತ್ತಾ ನಿಂದಿಸುತ್ತಿದ್ದರೆ ನಿಂದಿಸುವವನಿಗೂ ನೆಮ್ಮದಿ ಇಲ್ಲ ಕೇಳಿಸಿಕೊಳ್ಳುವವನಿಗೂ ನೆಮ್ಮದಿ ಇಲ್ಲ. ಲೋಕಕ್ಕಂತೂ ನಿಜಕ್ಕೂ ಹಾನಿಯೇ. ಹಾಗೆ ನಿಂದಿಸುವವರು ಛಿದ್ರಾನ್ವೇಷಿಗಳು. ಒಳ್ಳೆಯ ಗುಣಗಳು ಅವರಿಗೆ ಕಾಣಿಸುವುದೇ ಇಲ್ಲ. ಕಂಡರೂ ಗುರುತಿಸಿ ಮೆಚ್ಚುಗೆ ಸೂಚಿಸುವ ಗುಣ ಅವರಲ್ಲಿಲ್ಲ. ತಾವಾಗಿ ಮಾಡಲಾರರು, ಇತರರನ್ನು ಮಾಡಲೂ ಬಿಡಲಾರರು. ಸಜ್ಜನರರ ಸದ್ಗುಣಗಳನ್ನು ಕಂಡರೆ ಮತ್ಸರ, ದ್ವೇಷ! ತನಗೇನೂ ಲಾಭವಿಲ್ಲದಿದ್ದರೂ ಅವರನ್ನು ತುಚ್ಛೀಕರಿಸಿ ಅವಮಾನಿಸಿ ಸಮಾಜದಲ್ಲಿ ವಿಷಬೀಜ ಬಿತ್ತುವುದರಲ್ಲೇ ಏನೋ ಒಂದು ಆನಂದ ಅವರಿಗೆ. ಯಾರು ಏನೇ ಮಾಡಿದರೂ ಅದರಲ್ಲೊಂದು ಕೊರತೆ ಅವರಿಗೆ ಕಾಣಿಸುವುದು. ಅವರನ್ನು ಮೆಚ್ಚಿಸುವುದು, ಅವರ ಬಾಯನ್ನು ಮುಚ್ಚಿಸುವುದು ಅಸಾಧ್ಯ. ತಾನು ಮಾಡದಿರುವುದು, ಮಾಡುವವನನ್ನು ನಿಂದಿಸುವುದು ಸಜ್ಜನರನ್ನು ದ್ವೇಷಿಸುವುದು ಈ ಮೂರೂ ಗುಣಗಳೂ ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಆಪತ್ತಿಗೆ ದಾರಿಗಳು.

No comments:

Post a Comment