Saturday 2 February 2019

ಸುಭಾಷಿತ - ೧೬


ವೀಣೇವ ಶ್ರೋತ್ರಹೀನಸ್ಯ ಲೋಲಾಕ್ಷೀವ ವಿಚಕ್ಷುಷಃ।
ವ್ಯಸೌ ಕುಸುಮಮಾಲೇವ ಶ್ರೀಃ ಕದರ್ಯಸ್ಯ ನಿಷ್ಫಲಾ॥

ಅನ್ವಯ ಅರ್ಥ:

ಶ್ರೋತ್ರಹೀನಸ್ಯ (ಕಿವುಡನಿಗೆ)
 ವೀಣಾ ಇವ (ವೀಣೆಯಂತೆ)
 ವಿಚಕ್ಷುಷಃ(ಕುರುಡನಿಗೆ)
 ಲೋಲಾಕ್ಷೀ ಇವ(ಸುಂದರಿಯಂತೆ)
 ವ್ಯಸೌ(ನಿರ್ಜೀವಿಗೆ)
 ಕುಸುಮಮಾಲಾ ಇವ(ಹೂವಿನ ಹಾರದಂತೆ)
 ಕದರ್ಯಸ್ಯ (ಜಿಪುಣನಿಗೆ)
 ಶ್ರೀಃ(ಐಶ್ವರ್ಯವು)
 ನಿಷ್ಫಲಾ(ಪ್ರಯೋಜನಕ್ಕಿಲ್ಲ)

 ಭಾವಾರ್ಥ:

 ವೀಣಾವಾದನ ಎಷ್ಟು ಮಧುರವಾಗಿದ್ದರೇನು? ಕಿವುಡನು ಅದನ್ನು ಆಸ್ವಾದಿಸಲಾರ. ಎಷ್ಟು ನುಡಿಸಿದರೂ ಅದನ್ನು ನೋಡುತ್ತಾ ಇರಬಹುದೇ ಹೊರತು ಅದರ ಸುಖ ಆತನಿಗಿಲ್ಲ. ಸಖಿಯು ತ್ರಿಲೋಕಸುಂದರಿಯೇ ಆಗಿದ್ದರೂ ಕುರುಡನಿಗೆ ಆ ಸೌಂದರ್ಯಾನುಭವದ ಯೋಗವೇ ಇಲ್ಲ ಇಲ್ಲ. ಸುಗಂಧಿತವಾದ ಸುಂದರ ಹೂಮಾಲೆ ಹಾಕಿ ಅಲಂಕರಿದರೂ ಶವಕ್ಕೆ ಅದರ ಅರಿವೇ ಇಲ್ಲ. ಹಾಗೆಯೇ ಜಿಪುಣನ ಸಂಪತ್ತೂ ಕೂಡಾ ತೀರಾ ನಿಷ್ಫಲ. ಸಂಪತ್ತು ಇದ್ದರೆ ಸಾಲದು ಅದನ್ನು ಅನುಭವಿಸುವ ಮನಸ್ಸು ಬೇಕು. ಇದ್ದಾಗ ಹಲವರೊಂದಿಗೆ ಹಂಚಿಕೊಂಡು ಸುಖ ಅನುಭವಿಸಿದರೆ ಆ ಸಂಪತ್ತಿಗೊಂದು ಬೆಲೆ. ಸಂಪತ್ತಿಗೆ ಮೂರೇ ದಾರಿ. ದಾನ, ಭೋಗ, ನಾಶ. ಇತರರಿಗೆ ದಾನ ಮಾಡಿ ಅವರ ಸುಖಸಂತೋಷ ಕಂಡು ಸುಖಿಸುವುದು ಶ್ರೇಷ್ಠ. ಅದು ಬಿಟ್ಟರೆ ತಾನಾದರೂ ಭೋಗಿಸಿ ಸುಖಪಡಬೇಕು. ಇವೆರಡೂ ಇಲ್ಲದಿದ್ದರೆ ವ್ಯರ್ಥವಾಗಿ ಅದು ನಾಶವನ್ನೇ ಹೊಂದುತ್ತದೆ

No comments:

Post a Comment