Friday 22 February 2019

ಸುಭಾಷಿತ  ೪೫


 ಸುಶ್ರಾಂತೋಽಪಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ।   ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇಚ್ಚ ಗರ್ದಭಾತ್॥



ಅನ್ವಯ ಅರ್ಥ:

  ಸುಶ್ರಾಂತಃ ಅಪಿ(ಸಾಕಷ್ಟು ಆಯಾಸಗೊಂಡಿದ್ದರೂ)
  ಭಾರಂ (ಭಾರವನ್ನು)
  ವಹೇತ್ (ಹೊರುವುದು)
  ಶೀತೋಷ್ಣಂ ಚ (ಚಳಿಸೆಖೆಯನ್ನೂ)
  ನ ಪಶ್ಯತಿ (ಗಮನಿಸುವುದಿಲ್ಲ)
  ನಿತ್ಯಂ (ಯಾವಾಗಲೂ)
  ಸಂತುಷ್ಟಃ ಚರತಿ)
  (ಸಂತೋಷದಿಂದ ಸುತ್ತಾಡುತ್ತದೆ)
  ತ್ರೀಣಿ(ಈ ಮೂರು ಗುಣಗಳನ್ನು)
  ಗರ್ದಭಾತ್(ಕತ್ತೆಯಿಂದ)
  ಶಿಕ್ಷೇತ್(ಕಲಿಯಬೇಕು)




ಭಾವಾರ್ಥ:


 ಏನೂ ಅರಿಯದ ಮೂರ್ಖನನ್ನು ಕತ್ತೆಗೆ ಹೋಲಿಸುತ್ತಾರೆ. ಆದರೆ ಕಲಿಯುವ ಗುಣವಿದ್ದರೆ ಕತ್ತೆಯಿಂದಲೂ ಕಲಿಯುವುದಿದೆ.  ಎಷ್ಟು ಆಯಾಸಗೊಂಡಿದ್ದರೂ ಕತ್ತೆ ಭಾರವನ್ನು ಹೊರದೆ ಇರುವುದಿಲ್ಲ. ಬಿಸಿಲು ಮಳೆ ಚಳಿ ಗಾಳಿ ಏನೇ ಇದ್ದರೂ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಬೇಸರವೆಂಬುದು ಇಲ್ಲವೇ ಇಲ್ಲವೇನೋ! ಈ ಮೂರೂ ಗುಣಗಳು ಕತ್ತೆಯದೇ ಆದರೂ ಖಂಡಿತವಾಗಿಯೂ ಅನುಸರಣೀಯ.

   ಎಷ್ಟು ಆಯಾಸಗೊಂಡಿದ್ದರೂ ಒಪ್ಪಿಕೊಂಡ ಜವಾಬ್ದಾರಿಯಿಂದ ಹಿಂಜರಿಯುವಂತಿಲ್ಲ. ಎಂತಹ ಅಡೆತಡೆಗಳು ಬಂದರೂ ಅದನ್ನು ಪೂರೈಸುವ ದೃಢಚಿತ್ತವಿರಬೇಕು. ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಭೇದವಿಲ್ಲದೆ ಜವಾಬ್ದಾರಿಯನ್ನು ನಿಭಾಯಿಸಬೇಕು.  ಆಗ ಯಶಸ್ಸು ನಿಶ್ಚಯ.

No comments:

Post a Comment