Sunday 17 February 2019

ಸುಭಾಷಿತ ೩೩




ಶಿಲಂ ಕಿಮಲಂ ನ ಭವೇದನಲಮೌದರಂ ಬಾಧಿತುಮ್।
ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್।ಅಯತ್ನಮಲಮಲ್ಲಕಂ ಪಥಿ ಪಟಚ್ಚರಂ ಕಚ್ಚರಂ।
ಭಜಂತಿ ವಿಬುಧಾ ಮುಧಾ ಹ್ಯಹಹ ಕುಕ್ಷಿತಃ ಕುಕ್ಷಿತಾಃ।।
(ವೈರಾಗ್ಯ ಪಂಚಕ)


ಅನ್ವಯಾರ್ಥ:

 ಔದರಂ ಅನಲಂ(ಜಠರಾಗ್ನಿಯನ್ನು)
 ಬಾಧಿತುಂ (ತಡೆಯಲು)
 ಶಿಲಂ (ಹೊಲದಲ್ಲಿ ಬಿದ್ದಿರುವ ಧಾನ್ಯಗಳು)
 ಕಿಂ ನ ಅಲಮ್)(ಸಾಲದೇನು?) ಪ್ರಸೃತಿಪೂರಕಂ(ಬೊಗಸೆಯಲ್ಲಿ ಹಿಡಿಸುವ)
 ಸಾರಸಂ ಪಯಃ (ಸರೋವರದ ನೀರು)
 ಕಿಮು ನ ಧಾರಕಮ್(ಜೀವಧಾರಣೆ ಮಾಡದೇನು?) ಪಥಿ(ದಾರಿಯಲ್ಲಿ)
 ಅಯತ್ನಂ(ಪ್ರಯತ್ನವಿಲ್ಲದೆ ಸಿಗುವ)
 ಕಚ್ಚರಂ ಪಟಚ್ಚರಂ(ಚಿಂದಿ ಬಟ್ಟೆಯು)
 ಮಲಮಲ್ಲಕಂ(ಮಾನ ಮುಚ್ಚಲು ಕೌಪೀನ)
 (ನ ಭವೇತ್ ಕಿಮ್? ಆಗದೇನು?)
 ಅಹಹ(ಅಯ್ಯೋ)
 ಕುಕ್ಷಿತಃ (ಕಠಿನವಾಗಿ ಬಾಧಿಸಲ್ಪಟ್ಟ)
 ವಿಬುಧಾಃ(ಪಂಡಿತರು)
 ಮುಧಾ(ವ್ಯರ್ಥವಾಗಿ)
 ಕುಕ್ಷಿತಃ(ಕೆಟ್ಟ ರಾಜರನ್ನು)
 ಭಜಂತಿ(ಸೇವೆ ಮಾಡುತ್ತಾರೆ).



ಭಾವಾರ್ಥ:


  ಹೊಟ್ಟೆಯ ಹಸಿವನ್ನು ಹಿಂಗಿಸಲು ಎಷ್ಟು ತಾನೇ ಬೇಕು. ಕೊಯ್ಲಿನ ಬಳಿಕವೂ ಗದ್ದೆಯಲ್ಲಿ ಬಿದ್ದಿರುವ ಧಾನ್ಯ ಸಾಕು ಉದರಂಭರಣಕ್ಕೆ! ಪೃಥ್ವೀಭೂತಾಂಶವಾದ ಶರೀರದಲ್ಲಿ ಪ್ರಾಣಧಾರಣೆಗೆ ಧಾರಣೆ ನೀರು ಬೇಕೇ ಬೇಕು ನಿಜ. ಸರೋವರದಲ್ಲಿ ಎಷ್ಟು ನೀರಿದ್ದರೂ ಪ್ರಾಣಧಾರಣೆಗೆ ಬೇಕಾಗಿರುವುದು ಬೊಗಸೆನೀರು ಮಾತ್ರ. ದಾರಿಸಾಗುವಾಗ ಸಿಗುವ ಚಿಂದಿ ಬಟ್ಟೆ ಸಾಕು ಮಾನ ಮುಚ್ಚುವ ಕೌಪೀನಕ್ಕೆ. ತೃಪ್ತಿ ಇದ್ದರೆ ಅದೇ ನಿಜವಾದ ಸುಖ. ಇರುವಷ್ಟು ಸಾಕು ಎನಿಸಿದರೆ ಅದು ತೃಪ್ತಿ. ಬೇಕು ಎಂಬುದಕ್ಕೆ ಮಿತಿಯಿಲ್ಲ. ಒಂದಿದ್ದರೆ ಇನ್ನೊಂದು ಬೇಕು, ಇನ್ನೊಂದಿದ್ದರೆ ಮತ್ತೊಂದು ಬೇಕು. ಬೇಕುಗಳ ಪಟ್ಟಿಗೆ ಕೊನೆಯಿಲ್ಲ. ಜೀವಾಧಾರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸಿ ಹೆಚ್ಚಿನದು ಬೇಡ ಎನ್ನುವುದೇ ಅಪರಿಗ್ರಹ. ಅದರಿಂದಲೇ ತೃಪ್ತಿ. ಯೋಗಿಯೋ ವಿರಾಗಿಯೋ ಆಗುವುದು ಲೌಕಿಕರೆಲ್ಲರಿಗೆ ಅಸಾಧ್ಯ. ಆದರೂ ಒಂದು ಮಟ್ಟದಲ್ಲಿ ಬೇಕುಗಳಿಗೆ ಕಡಿವಾಣ ಹಾಕಲೇ ಬೇಕು. ಅತಿಯಾದ ಸಂಪಾದನೆ ಇನ್ನೊಬ್ಬನ ಸೊತ್ತನ್ನು ಅಪಹರಿಸಿದಂತೆಯೇ. ಇದನ್ನೆಲ್ಲಾ ಅರಿತಿದ್ದೂ ಹೊಟ್ಟೆಪಾಡಿಗಾಗಿ ಪಂಡಿತರು ರಾಜರ, ಶ್ರೀಮಂತರ ಸೇವೆಯನ್ನು ಮಾಡುತ್ತಾರಲ್ಲ ಅಯ್ಯೋ ಎನಿಸುತ್ತದೆ.

No comments:

Post a Comment