Monday 18 February 2019

ಸುಭಾಷಿತ - ೩೮
ಉಪಭೋಗಕಾತರಾಣಾಂ ಪುರುಷಾಣಾಮರ್ಥಸಂಚಯಪರಾಣಾಮ್।

ಕನ್ಯಾಮಣಿರಿವ ಸದನೇ ತಿಷ್ಠತ್ಯರ್ಥಃ ಪರಸ್ಯಾರ್ಥೇ।।



ಅನ್ವಯಾರ್ಥ:


ಉಪಭೋಗಕಾತರಾಣಾಂ( ಅನುಭವಿಸಲು ಕಾತರರಾಗಿ) ಅರ್ಥಸಂಚಯಪರಾಣಾಮ್(ಸಂಪತ್ತನ್ನು ಸಂಗ್ರಹಿಸುವದರಲ್ಲೇ ನಿರತರಾದ)
 ಪುರುಷಾಣಾಂ(ಮನುಷ್ಯರ)
 ಅರ್ಥಃ(ಸಂಪತ್ತು)
 ಕನ್ಯಾಮಣಿಃ ಇವ(ವಿವಾಹಯೋಗ್ಯ ಕನ್ಯೆಯಂತೆ) ಪರಾರ್ಥೇ(ಬೇರೆಯವರಿಗಾಗಿ)
 ಸದನೇ (ಮನೆಯಲ್ಲಿ)
 ತಿಷ್ಠತಿ (ಇರುತ್ತದೆ).




 ಭಾವಾರ್ಥ:


 ವಿವಾಹಯೋಗ್ಯಳಾದ ಮಗಳು ಎಷ್ಟೇ ಪ್ರೀತಿಪಾತ್ರಳಾದರೂ ಸಕಲಗುಣಸಂಪನ್ನೆಯಾದರೂ ಯೋಗ್ಯವರನಿಗೆ ವಿವಾಹಮಾಡಿ ಕೊಡಲೇ ಬೇಕು. ಉಭಯ ಕುಲಗಳನ್ನು ಬೆಳಗಿಸಬೇಕಾದ ಕನ್ಯೆಯನ್ನು ಕೊಡಲಾರೆ ಎಂದು ಕಟ್ಟಿಟ್ಟರೆ ಆ ಕನ್ಯಾಧನಕ್ಕೆ ಏನು ಬೆಲೆ? ಸಂಪಾದಿಸಿದ ಸಂಪತ್ತೂ ಅಷ್ಟೇ. ಉಪಭೋಗಿಸಲೆಂದು ಸಂಪಾದಿಸಿ ಖರ್ಚು ಮಾಡಲು ಮನಸ್ಸು ಬಾರದೆ ಕಟ್ಟಿಟ್ಟರೆ ಅದರಿಂದ ಸುಖವೆಂದೂ ಸಿಗಲಾರದು. ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿ ದಾನವನ್ನೂ ಮಾಡಿದರೆ ಅದು ಅತಿಶ್ರೇಷ್ಠ ಗತಿ. ಮನಸ್ಸಿಲ್ಲದಿದ್ದರೆ ಸ್ವಂತಕ್ಕೆ ಭೋಗಕ್ಕಾದರೂ ಉಪಯೋಗಿಸಬೇಕು. ಏಕೆಂದರೆ ಸಂಪತ್ತಿಗೆ ಮೂರೇ ಗತಿ. ಒಂದು ದಾನ ಎರಡನೆಯದು ಭೋಗ. ಇವೆರಡೂ ಆಗದಿದ್ದಲ್ಲಿ ಅದು ನಾಶವೇ.
ಒಂದು ಚಾಟುಶ್ಲೋಕವಿದೆ : ಜಿಪುಣನಿಗೆ ಸರಿಸಾಟಿಯಾದ ದಾನಿಯೇ ಇಲ್ಲ .ಏಕೆಂದರೆ ಸಾಮಾನ್ಯವಾಗಿ ದಾನಿಗಳು ತಮಗಾಗಿಯೂ ಖರ್ಚು ಮಾಡುತ್ತಾರೆ. ಕೈಯಾರೆ ತುಂಬಾ ದಾನ ಮಾಡುತ್ತಾರೆ. ಆದರೆ ಜಿಪುಣ ಹಾಗಲ್ಲ. ಸಂಪತ್ತನ್ನು ತನಗಾಗಿ ಸ್ವಲ್ಪವೂ ವಿನಿಯೋಗ ಮಾಡುವುದಿಲ್ಲ. ಕೊನೆಗೆ ಕೈಯಲ್ಲಿ ಮುಟ್ಟದೇ ಅ ಬೇರೆಯವರಿಗೆ ಸೇರಿಸಿಬಿಡುತ್ತಾನೆ!!!

No comments:

Post a Comment