Friday 1 February 2019

ಸುಭಾಷಿತ - ೧೨


 ಜನ್ಮೈಶ್ವರ್ಯಶ್ರುತಶ್ರೀಭಿರೇಧಮಾನಮದಃ ಪುಮಾನ್।   ನೈವಾರ್ಹತ್ಯಭಿಧಾತುಂ ವೈ ತ್ವಾಮಕಿಂಚನಗೋಚರಮ್।।*                                           (ಶ್ರೀಮದ್ಭಾಗವತ)



    ಅನ್ವಯ ಅರ್ಥ:

 ಜನ್ಮೈಶ್ವರ್ಯಶ್ರುತಶ್ರೀಭಿಃ (ಜನ್ಮ, ಸಂಪತ್ತು,ಕೀರ್ತಿ ಮೊದಲಾದವುಗಳಿಂದ)
 ಏಧಮಾನಮದಃ(ಮದವನ್ನು ಹೊಂದಿದ)
 ಪುಮಾನ್(ನರನು)
 ಅಕಿಂಚನಗೋಚರಂ(ಶೂನ್ಯರಾದವರಿಗೆ ಗೋಚರಿಸುವ)
 ತ್ವಾಂ (ನಿನ್ನನ್ನು )
 ಅಭಿಧಾತುಂ ವೈ(ಹೆಸರು ಹೇಳಲೂ)
 ನ ಏವ ಅರ್ಹತಿ (ಅರ್ಹನಾಗುವುದೇ ಇಲ್ಲ)


 ಭಾವಾರ್ಥ:


 ತುಪ್ಪವಿರುವುದು ಹಾಲಿನಲ್ಲೇ ಆದರೂ ಆ ತುಪ್ಪ ಸಿಗಬೇಕಾದರೆ ಹಾಲು ಇಲ್ಲವಾಗಲೇ ಬೇಕು. ಅದರ ಮಧುರತ್ವ ಸ್ನಿಗ್ಧತ್ವವೇ ಮೊದಲಾದ ಎಲ್ಲಾ ಗುಣಗಳನ್ನು ಕಳೆದುಕೊಂಡ ಹೊರತು ತುಪ್ಪ ಕಾಣಿಸಲಾರದು. ಮನುಷ್ಯನೂ ಅಷ್ಟೇ. ತನ್ನಲ್ಲೇ ದೇವರಿದ್ದರೂ ಕಾಣಬೇಕಾದರೆ ನಾನು ಎಂಬ ಭಾವವನ್ನು ಕಳೆದುಕೊಳ್ಳಬೇಕು. ನಾನು ಇಲ್ಲ ನೀನೇ ಎಲ್ಲಾ ಎಂದಾಗಲೇ ಆತನ ದರ್ಶನ ಸಾಧ್ಯ. ನಾನು ಉತ್ತಮ ಕುಲಜ, ಐಶ್ವರ್ಯವಂತ, ಮಹಾಭಕ್ತನೆಂಬ ಕೀರ್ತಿ ಹೊಂದಿದವನು ಎಂಬ ಮದವಿದ್ದರೆ ಆ ಭಗವಂತನ ಹೆಸರು ಹೆಸರು ಹೇಳುವ ಅರ್ಹತೆಯೂ ಇಲ್ಲವಾಗುತ್ತದೆ. ಚತುರ್ವೇದ ಷಟ್ಶಾಶಾಸ್ತ್ರ ಅಷ್ಟಾದಶ ಪುರಾಣಗಳನ್ನು ಅರೆದು ಕುಡಿದಿದ್ದರೂ ಮದವಿದ್ದರೆ ಎಲ್ಲವೂ ವ್ಯರ್ಥ. ಭಗವಂತ ಕಾಣಿಸಬೇಕಾದರೆ ಹೃದಯ ನಿರ್ಮಲವಾಗಿರಬೇಕು. ಇಲ್ಲವಾದರೆ ಯಾವ ವೇದವೂ ಭಗವಂತನನ್ನು ತೋರಿಸಲಾರದು. ಆದ್ದರಿಂದಲೇ ಕುಂತಿ ಕೃಷ್ಣನನ್ನು ಅಕಿಂಚನಗೋಚರ(ಏನೂ ಇಲ್ಲದವನಿಗೆ ಕಾಣಿಸುವವನು) ಎಂದು ಸ್ತುತಿಸಿದ್ದಾಳೆ

No comments:

Post a Comment