Friday 15 February 2019

ಸುಭಾಷಿತ - ೩೨

  ಅಕಾಮಸ್ಯ ಕ್ರಿಯಾ ಕಾಚಿದ್ದೃಶ್ಯತೇ ನೇಹ ಕರ್ಹಿಚಿತ್।
  ಯದ್ಯದ್ಧಿ ಕುರುತೇ ಜಂತುಸ್ತತ್ತತ್ಕಾಮಸ್ಯ ಚೇಷ್ಟಿತಮ್।।


 ಅನ್ವಯ ಅರ್ಥ:


 ಅಕಾಮಸ್ಯ(ಬಯಕೆಗಳಿಲ್ಲದವನ)
 ಕಾಚಿತ್ ಕ್ರಿಯಾ(ಯಾವುದೇ ಕಾರ್ಯ)
 ಇಹ(ಇಲ್ಲಿ)
 ಕರ್ಹಿಚಿತ್(ಎಂದಿಗೂ)

 ನ ದೃಶ್ಯತೇ(ಕಾಣಿಸುವುದಿಲ್ಲ)
 ಜಂತುಃ (ಜೀವಿಯು)
 ಯತ್ ಯತ್ ಹಿ ಕುರುತೇ(ಏನೇನೆಲ್ಲ ಮಾಡುತ್ತದೋ)
 ತತ್ ತತ್(ಅದೆಲ್ಲವೂ)
 ಕಾಮಸ್ಯ (ಬಯಕೆಯ)
 ಚೇಷ್ಟಿತಮ್(ಚೇಷ್ಟೆಗಳೇ ಆಗಿವೆ)




ಭಾವಾರ್ಥ:

ಕಾಮ ಎಂದರೆ ಬಯಕೆ. ಬಯಕೆಯಿಲ್ಲದ ಯಾವುದೇ ಒಂದು ಕಾರ್ಯವನ್ನೂ ಯಾವ ಜಂತುವೂ ಮಾಡುವುದಿಲ್ಲ. ಹುಟ್ದಿದ ಕೂಡಲೇ ಹಸಿವನ್ನು ಹಿಂಗಿಸಿಕೊಳ್ಳಲು ಅಳುವಲ್ಲಿಂದಾರಂಭಿಸಿ ಸಾಯುತ್ತಿರುವಾಗ ಮೋಕ್ಷಕ್ಕಾಗಿ ಭಗವಂತನನ್ನು ನೆನೆಯುವ ವರೆಗೆ ಎಲ್ಲಾ ಕಾರ್ಯಗಳಿಗೂ ಕಾರಣ ಬಯಕೆಯೇ. ನಿವೃತ್ತಿಮಾರ್ಗಿಗಳಾದ ಶುಕ, ಜಡಭರತರಂತಹ ಬ್ರಹ್ಮಜ್ಞಾನಿಗಳನ್ನು ಹೊರತುಪಡಿಸಿ ಎಲ್ಲಾ ಜೀವಿಗಳೂ ಬಯಕೆಯುಳ್ಳವರೇ. ಸಾಧನೆಗೆ ಬಯಕೆ ಮತ್ತು ಸಂಕಲ್ಪ ಬೇಕೇ ಬೇಕು. ಇಲ್ಲದಿದ್ದಲ್ಲಿ ಜಡತ್ವವು ತಾನೇ ತಾನಾಗಿ ಮೆರೆಯುವುದು. ಪ್ರವೃತ್ತಿ ಮಾರ್ಗದ ಕಾಮನೆ ಬಂಧನಕ್ಕಾಗಿ ಕಾರಣ. ಸ್ವಾರ್ಥರೂಪದ ಲೌಕಿಕ ಆಸಕ್ತಿಯನ್ನು ಬದಿಗೊತ್ತಿ ಪರಾರ್ಥವಾದ ಲೋಕಹಿತಕಾರಕವಾದ ನಿವೃತ್ತಿಮಾರ್ಗದ ಕಾರ್ಯದಲ್ಲಿ ತೊಡಗಿದಾಗ ಆ ಕಾಮನೆ ಸಾಧುವೆನಿಸುತ್ತದೆ. ಸಾಧುವಾದ ಬಯಕೆ ಮತ್ತು ಸತ್ಸಂಕಲ್ಪದಿಂದ ಲೋಕಕ್ಕೆ ಹಿತ. ರಾವಣನಂತೆ ಸಾಧುವಲ್ಲದ ಬಯಕೆ ಹೊಂದಿ ಅದರ ಸಾಧನೆಗಾಗಿ ದುರ್ಮಾರ್ಗವನ್ನು ಹಿಡಿದಾಗ ತನಗೂ ಹಾನಿ ಲೋಕಕ್ಕೂ ಹಾನಿ. ಕಾಮ ಎಂದೂ ಅಹಿತವಲ್ಲ. ಹಿಡಿತವಲ್ಲದ ಬಯಕೆ ಮಾತ್ರ ಅರಿಷಡ್ವರ್ಗಗಳಲ್ಲೊಂದಾದ ಕಾಮ.

No comments:

Post a Comment