Saturday 2 February 2019

ಸುಭಾಷಿತ - ೧೭


 ಸ್ವಭಾವಂ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ।   ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್॥


ಅನ್ವಯ ಅರ್ಥ:


 ಸ್ವಭಾವಂ(ಮೂಲಗುಣವನ್ನು)
 ಉಪದೇಶೇನ (ಉಪದೇಶದ ಮೂಲಕ)
 ಅನ್ಯಥಾ ಕರ್ತುಂ(ಬದಲಾಯಿಸಲು)
 ನ ಶಕ್ಯತೇ(ಸಾಧ್ಯವಾಗದು)
 ಸುತಪ್ತಂ ಅಪಿ(ಚೆನ್ನಾಗಿ ಕಾಯಿಸಿದರೂ)
 ಪಾನೀಯಂ(ನೀರು)
 ಪುನಃ(ಮತ್ತೆ)
 ಶೀತತಾಂ ಗಚ್ಛತಿ(ತಣ್ಣಗಾಗುತ್ತದೆ).


ಭಾವಾರ್ಥ:


 ನೀರನ್ನು ಕಾಯಿಸಿದಾಗ ಅದು ಬಿಸಿಯಾಗುವುದೇನೋ ಹೌದು ಆದರೆ ಶಾಶ್ವತವಾಗಿ ಬಿಸಿಯಾಗಿಯೇ ಉಳಿದೇತೆ? ಸಹಜವಾಗಿಯೇ ಸ್ವಲ್ಪವೇ ಸಮಯದಲ್ಲಿ ಅದು ತಣ್ಣಾಗಾಗುವುದಿಲ್ಲವೇ? ಮಳೆಗಾಲವಾಗಲೀ ಚಳಿಗಾಲವಾಗಲೀ ಬೇಸಿಗೆಯೇ ಆಗಿರಲಿ ತಣ್ಣಗಿರುವುದೇ ಆ ನೀರಿನ ಸಹಜ ಗುಣ. ಬಿಸಿ ಮಾಡಿದಾಗ ತಾತ್ಕಾಲಿಕವಾಗಿ ಮಾತ್ರ ಬದಲಾವಣೆಯಾಗುವುದು. ಎಷ್ಟು ಕಾಯಿಸಿದರೂ ಅಷ್ಟೇ! ಜೀವಿಗಳಲ್ಲಿಯೂ ಹಾಗೆಯೇ. ಮೂಲ ಸ್ವಭಾವ ಎಂದಿಗೂ ಬದಲಾಗದು. ಕರಿಕರಡಿಯನ್ನು ಎಂದಿಗೂ ಬಿಳಿ ಮಾಡಲಾಗದು, ಬಿಳಿಕರಡಿಯನ್ನು ಕಪ್ಪು ಮಾಡುವುದೂ ಅಸಾಧ್ಯವೇ. ಅಂತರಂಗ ಸುಸಂಸ್ಕೃತ ಆಗಿದ್ದರೆ ಬಾಹ್ಯ ಸಂಸ್ಕಾರಗಳಿಂದ ವ್ಯಕ್ತಿಯಲ್ಲಿ ಬದಲಾವಣೆ ತರಬಹುದು. ಸ್ವಭಾವವೇ ದುಷ್ಟವಾಗಿದ್ದರೆ ಆ ಮೂರ್ಖನಿಗೆ ನೂರ್ಕಾಲ ಬುದ್ಧಿ ಹೇಳಿದರೂ ಗೋರ್ಕಲ್ಲ ಮೇಲೆ ಮಳೆ ಬರೆದಂತೆಯೇ ಸರಿ. ಪಾತ್ರಾಪಾತ್ರ ವಿವೇಚನೆಯಿಲ್ಲದೆ ಬುದ್ಧಿ ಹೇಳಿದರೆ ಹೇಳುವವನ ಶ್ರಮ ವ್ಯರ್ಥವಾದೀತು, ಹೇಳುವವನೇ ಮೂರ್ಖನೆನಿಸಿಕೊಂಡಾನು.

No comments:

Post a Comment