Wednesday 20 February 2019

       ಸುಭಾಷಿತ - ೪೧

 ಯಥಾಶಕ್ತಿ ಚಿಕೀರ್ಷಂತಿ ಯಥಾಶಕ್ತಿ ಚ ಕುರ್ವತೇ।
 ನ ಕಿಂಚಿದವಮನ್ಯಂತೇ ನರಾಃ ಪಂಡಿತಬುದ್ಧಯಃ॥
     (ವಿದುರ ನೀತಿ)


ಅನ್ವಯಾರ್ಥ:

 ಪಂಡಿತಬುದ್ಧಯಃ ನರಾಃ( ಪಾಂಡಿತ್ಯ ಉಳ್ಳ ಮನುಷ್ಯರು)
 ಯಥಾಶಕ್ತಿ(ಶಕ್ತಿಗನುಣವಾಗಿ)
 ಚಿಕೀರ್ಷಂತಿ(ಮಾಡಲು ಇಚ್ಛಿಸುತ್ತಾರೆ)
 ಚ(ಮತ್ತು)
 ಯಥಾಶಕ್ತಿ(ಶಕ್ತ್ಯನುಸಾರ)
 ಕುರ್ವತೇ(ಮಾಡುತ್ತಾರೆ)
 ಕಿಂಚಿತ್(ಸ್ವಲ್ಪವೂ)
 ನ ಅವಮನ್ಯಂತೇ(ಕೀಳಾಗಿ ತಿಳಿದುಕೊಳ್ಳುವುದಿಲ್ಲ)


ಭಾವಾರ್ಥ:

ಪಂಡಾ  ಜ್ಞಾನದಿಂದ ಬೆಳಗುವ ಬುದ್ಧಿ ಪಂಡಾ. ಪಂಡಾ ಇರುವವನು ಪಂಡಿತ. ನಿಜವಾದ ಪಂಡಿತ ತಾನೇನು ತಾನೆಷ್ಟು ಎಂಬುದನ್ನು ಅರಿತಿರುತ್ತಾನೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಯೋಚನೆ ಯೋಜನೆಗಳಿರುತ್ತವೆ. ಅದೇ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ತನಗೆ ತಿಳಿಯದ ವಿಷಯದಲ್ಲಿ ಮಾತನಾಡುವುದು ಮಾಡಲಾಗದ ಕೆಲಸದಲ್ಲಿ ತೊಡಗುವುದು ಬುದ್ಧಿವಂತರ ಲಕ್ಷಣವಲ್ಲ. ಅರಿತಲ್ಲಿ ಜಂಬವಾಗಲೀ ಅರಿಯದಿದ್ದಲ್ಲಿ ಕೀಳರಿಮೆಯಾಗಲೀ ಎಂದಿಗೂ ಸಲ್ಲದು. ಹಾಗೆಯೇ ಇತರರನ್ನು ಕೀಳಾಗಿ ಕಾಣುವುದೂ ಕೂಡಾ ಪಂಡಿತರಿಗೆ ಎಂದೂ ಶೋಭಿಸದು. ಬಸವಣ್ಣ ಹೇಳಿದಂತೆ 'ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ' ಅವಿವೇಕಗಳು ಶಕ್ತಿ ಮೀರಿದ ಕಾರ್ಯದಲ್ಲಿ ತೊಡಗಿಸಿಕೊಂಡು ಕಷ್ಟಕ್ಕೊಳಗಾಗುತ್ತಾರೆ, ನನಗೆ ಬೇಕಾಗಿರಲಿಲ್ಲವಪ್ಪಾ ಎಂದು ಮನಸ್ಸಿನಲ್ಲಿ ಕೊರಗುತ್ತಾರೆ. ಮಾಡಿದ್ದಕ್ಕಿಂತ ಹೆಚ್ಚು ಹೇಳಿಕೊಳ್ಳುತ್ತಾರೆ.

No comments:

Post a Comment