Friday 15 February 2019

 ಸುಭಾಷಿತ ೨೭:


 ಮಹಾನುಭಾವಸಂಸರ್ಗಃ ಕಸ್ಯ ನೋನ್ನತಿಕಾರಕಃ।
 ರಥ್ಯಾಂಬು ಜಾಹ್ನವೀಸಂಗಾತ್ ತ್ರಿದಶೈರಪಿ ವಂದ್ಯತೇ॥


ಅನ್ವಯ ಅರ್ಥ:

 ಮಹಾನುಭಾವಸಂಸರ್ಗಃ(ಮಹಾನುಭಾವರ ಸಹವಾಸವು)       ಕಸ್ಯ (ಯಾರಿಗೆ ತಾನೇ)
 ನ ಉನ್ನತಿಕಾರಕಃ(ಶ್ರೇಯಸ್ಕರವಲ್ಲ?)
 ರಥ್ಯಾಂಬು(ಮಾರ್ಗದಲ್ಲಿ ಹರಿವ ನೀರು)   ಜಾಹ್ನವೀಸಂಗಾತ್(ಗಂಗೆಯ ಸಂಗಮದಿಂದ)
 ತ್ರಿದಶೈಃ ಅಪಿ (ದೇವತೆಗಳಿಂದಲೂ)
 ವಂದ್ಯತೇ(ಪೂಜಿಸಲ್ಪಡುತ್ತದೆ)



 ಭಾವಾರ್ಥ:


  ಮಹಾನುಭಾವರ ಸಂಗದಿಂದ ಕೇಡೆಂಬುದು ಇಲ್ಲವೇ ಇಲ್ಲ. ಎಂತಹ ಪಾಪಿಯೇ ಆದರೂ ಮನಃಪೂರ್ವಕವಾಗಿ ಸಾಧುಜನರೊಂದಿಗೆ ಸೇರಿದರೆ ಕಾಲಕ್ರಮೇಣ ಪರಿಶುದ್ಧನಾಗುವನು. ಕಾಡ ಬೇಡನಾದ ರತ್ನಾಕರನೂ ಆದಿಕವಿ ಆದುದು ನಾರದರ ಸಂಸರ್ಗದಿಂದ!

  ರಸ್ತೆಬದಿಯ ಗಟಾರದ ನೀರೂ ಸಹ ಗಂಗಾನದಿಯನ್ನು ಸೇರಿದಾಗ ಪೂಜ್ಯರಾದ ದೇವತೆಗಳಿಂದಲೂ ಪೂಜಿಸಲ್ಪಡುತ್ತದೆ. ಹೂವಿನೊಂದಿಗೆ ಸೇರಿದಾಗ ದಾರವೂ ದೇವರ ಮುಡಿಯೇರುತ್ತದೆ.

   ಸಜ್ಜನರ ಸ್ವಭಾವವೇ ಹಾಗೆ. ಮೇಲುಕೀಳೆಂಬ ಭಾವವಿಲ್ಲದೆ ಬಳಿಬಂದ ಎಲ್ಲರನ್ನೂ ಉದ್ಧರಿಸುತ್ತಾರೆ. ಬೊಗಸೆಯಲ್ಲಿನ ಹೂವು ಎಡಗೈ ಬಲಗೈ ಎಂದು ಭಾವಿಸದೇ ಎರಡೂ ಕೈಗಳನ್ನು ಏಕರೀತಿಯಲ್ಲಿ ಪರಿಮಳಗೊಳಿಸುತ್ತದೆ.

No comments:

Post a Comment