Thursday 7 February 2019

ಸುಭಾಷಿತ - ೨೦


ಅನುಗಂತುಂ ಸತಾಂ ವರ್ತ್ಮ ಕೃತ್ಸ್ನಂ ಯದಿ ನ ಶಕ್ಯತೇ।ಸ್ವಲ್ಪಮಪ್ಯನುಗಂತವ್ಯಂ ಮಾರ್ಗಸ್ಥೋ ನಾವಸೀದತಿ।।


ಅನ್ವಯ ಅರ್ಥ:

ಸತಾಂ(ಸತ್ಪುರುಷರ)
 ವರ್ತ್ಮ(ಹಾದಿಯನ್ನು)
ಕೃತ್ಸ್ನಂ (ಸಂಪೂರ್ಣವಾಗಿ)
ಅನುಗಂತುಂ(ಅನುಸರಿಸಲು)
ಯದಿ ನ ಶಕ್ಯತೇ (ಸಾಧ್ಯವಾಗದಿದ್ದರೆ)
ಸ್ವಲ್ಪಂ ಅಪಿ(ಸ್ವಲ್ಪವಾದರೂ) ಅನುಗಂತವ್ಯಮ್(ಅನುಸರಿಸಬೇಕು)
ಮಾರ್ಗಸ್ಥಃ (ಧರ್ಮಮಾರ್ಗದಲ್ಲಿ ಇರುವವನು)
ನ ಅವಸೀದತಿ(ವಿಷಣ್ಣನಾಗುವುದಿಲ್ಲ)


ಭಾವಾರ್ಥ:

 ಮಹಾತ್ಮರಾದ ಹಿರಿಯರು ತೋರಿಸಿದ ಧರ್ಮದ ದಾರಿ ಸುಗಮವೂ ಅಲ್ಲ ರೋಚಕವೂ ಅಲ್ಲ. ಎಷ್ಟೋ ಬಾರಿ ಅಸಾಧ್ಯವೆಂದೇ ಎನಿಸುತ್ತದೆ. ಹಾಗೆಂದುಕೊಂಡು ಪ್ರಯತ್ನ ಮಾಡದೇ ಇರುವುದು ಲೇಸಲ್ಲ. ಗಂಧದ ಮರದ ದಿಮ್ಮಿಗೆ ಯಾವ ಸುಗಂಧವಿದೆಯೋ ಅದೇ ಸುಗಂಧ ಸಣ್ಣ ತುಂಡಿಗೂ ಇದೆ. ಪರಿಮಳ ಬೀರಲು ದಿಮ್ಮಿಯೇ ಆಗಬೇಕಾಗಿಲ್ಲ. ಸಂಪೂರ್ಣವಾಗಿ ಮಹಾತ್ಮರನ್ನು ಅನುಸರಿಸುವುದು ಸಾಧ್ಯವಿಲ್ಲದಿದ್ದರೂ ಅಲ್ಪವೋ ಸ್ವಲ್ಪವೋ ಅವರ ಹಾದಿಯಲ್ಲೇ ಸಾಗಿದರೆ ಕಷ್ಟವೆನಿಸಿದರೂ ಸೋಲೆಂದಿಗೂ ಇಲ್ಲ. ಗರುಡನಂತೆ ವೇಗವಾಗಿ ಸಾಗುವುದು ಇರುವೆಗೆ ಸಾಧ್ಯವಿಲ್ಲ ನಿಜ. ಸಾಮರ್ಥ್ಯವಿದ್ದರೂ ಹಾರುವ ಪ್ರಯತ್ನಮಾಡದಿದ್ದರೆ ಗರುಡನಾದರೂ ಇದ್ದಲ್ಲೇ ಇರಬೇಕಾಗುತ್ತದೆ. ಅತ್ಯಲ್ಪ ಸಾಮರ್ಥ್ಯದ ಇರುವೆಯೂ ಸಹ ನಿಧಾನವಾಗಿಯಾದರೂ ಸಾಗುತ್ತಲೇ ಇದ್ದರೆ ಯೋಜನಾಂತರವನ್ನೂ ಕ್ರಮಿಸಬಲ್ಲುದು. ಸಾಧಿಸಬೇಕೆಂಬ ಮನಸ್ಸು ಮತ್ತು ದೃಢವಾದ ನಿರ್ಧಾರದೊಂದಿಗೆ ಕಾರ್ಯಪ್ರವೃತ್ತರಾದರೆ ಒಂದಿಲ್ಲೊಂದು ದಿನ ಸಾಧಕರಾಗುವುದರಲ್ಲಿ ಸಂದೇಹವಿಲ್ಲ.

No comments:

Post a Comment