Monday 18 February 2019

ಸುಭಾಷಿತ - ೩೪


ಕ್ಷೋಣೀಕೋಣಶತಾಂಶಪಾಲನಕಲಾದುರ್ವಾರಗರ್ವಾನಲ- ಕ್ಷುಭ್ಯತ್ಕ್ಷುದ್ರನರೇಂದ್ರಚಾರುರಚನಾಧನ್ನ್ಯಾನ್ನಮನ್ಯಾಮಹೇ।ದೇವಂಸೇವಿತುಮೇವ ನಿಶ್ಚಿನುಮಹೇ ಯೋಽಸೌ ದಯಾಲುಃ ಪರಾ।
ಧಾನಾಮುಷ್ಟಿಮುಚೇಕುಚೇಲಮುನಯೇ ದತ್ತೇ ಸ್ಮ ವಿತ್ತೇಶತಾಮ್।।
 (ವೈರಾಗ್ಯ ಪಂಚಕ )


ಅನ್ವಯಾರ್ಥ:

 ಕ್ಷೋಣೀಕೋಣ(ಭೂಮಿಯ ಒಂದು ಮೂಲೆಯ)
ಶತಾಂಶ(ನೂರಕ್ಕೊಂದುಭಾಗದ)
ಪಾಲನಕಲಾ(ಪಾಲಿಸುವ ಕಲೆಯಿಂದಲೇ)
ದುರ್ವಾರಗರ್ವಾನಲಕ್ಷುಭ್ಯತ್(ತಡೆಯಲಾರದ ಗರ್ವವೆಂಬ ಬೆಂಕಿಯಿಂದ ಕುದಿಯುತ್ತಿರುವ)
ಕ್ಷುದ್ರ ನರೇಂದ್ರ(ಕ್ಷುದ್ರರಾದ ರಾಜರ ಕುರಿತು)
ಚಾರುರಚನಾಧನ್ಯಾನ್(ಇತಿ)(ಸುಂದರಕೃತಿಗಳನ್ನು ರಚಿಸಿ ಧನ್ಯರಾದೆವು ಎಂದು)
 ನ ಮನ್ಯಾಮಹೇ(ತಿಳಿಯುವುದಿಲ್ಲ).
 ಯಃ(ಯಾರು)
ಧಾನಾಮುಷ್ಟಿಮುಚೇ(ಮುಷ್ಠಿಯಷ್ಟು ಧಾನ್ಯವನ್ನು ಕೊಟ್ಟ) ಕುಚೇಲಮುನಯೇ (ಸುದಾಮಾ ಮುನಿಗೆ)
 ವಿತ್ತೇಶತಾಂ ದತ್ತೇ(ಸಂಪತ್ತಿನ ಒಡತನವನ್ನು ನೀಡಿದ) ಪರಾ(ಪರಮಶ್ರೇಷ್ಠನಾದ)
 ದಯಾಲುಃ ಅಸೌ (ಅಸ್ತಿ)
(ಆ ದಯಾಳುವಿದ್ದಾನೋ)
 ತಂ ದೇವಂ (ಆ ದೇವನನ್ನು)
ಸೇವಿತುಂ ಏವ(ಸೇವೆಮಾಡಲು ಮಾತ್ರ ) ನಿಶ್ಚಿನುಮಹೇ(ನಿರ್ಧಾರ ಮಾಡುತ್ತೇವೆ)



 ಭಾವಾರ್ಥ:


 ಅನಂತ ವಿಶ್ವ. ಅದರೊಳಗೆ ಅಸಂಖ್ಯ ಆಕಾಶಗಂಗೆಗಳು. ಒಂದೊಂದು ಆಕಾಶಗಂಗೆಯಲ್ಲೂ ಲೆಕ್ಕವೇ ಇಲ್ಲದಷ್ಟು ಸೂರ್ಯರು. ಅವರಲ್ಲೊಬ್ಬ ನಮಗೆಲ್ಲ ಗೊತ್ತಿರುವ ಸೂರ್ಯ. ಅವನ ಸುತ್ತ  ಭೂಮಿಗಿಂತ ಎಷ್ಟೋ ದೊಡ್ಡದಾದ ಚಿಕ್ಕದಾದ ಗ್ರಹಗಳು. ಅವುಗಳಲ್ಲೊಂದು ಭೂಮಿ.  ಭೂಮಿಯ ಮೇಲೆ ಒಂದು ಸಣ್ಣ ಭಾಗಕ್ಕೆ ಅರಸರಾಗಿ ಗರ್ವದಿಂದ ಬೀಗುವ ಅವರನ್ನು ಕುರಿತು ಕೃತಿಗಳನ್ನು ರಚಿಸಿದರೆ ಅವರು ಮಹಾಕವಿ ಎಂಬ ಬಿರುದನ್ನೋ ಒಂದಷ್ಟು ಧನವನ್ನೋ ಸಂಪರ್ಕಿಸಬಹುದು. ಅಷ್ಟರಿಂದಲೇ ಧನ್ಯರಾದೆವು ಎಂದುಕೊಳ್ಳುವವರು ಮಹಾತ್ಮರಲ್ಲ ಮೂರ್ಖರು. ಭಜಿಸಬೇಕಾದ್ದು ಕೀರ್ತಿಸಬೇಕಾದ್ದು ಈ ನಾಯಕರನ್ನಲ್ಲ. ವಿಶ್ವನಾಯಕನಾದ ಭಗವಂತನನ್ನು.
  ಹಿಂದಿಯಲ್ಲೊಂದು ಕಥೆಯಿದೆ.
 ಬಡವರಾದ ಬುದ್ಧಿ ಸುಬುದ್ದಿ ಎಂಬ ವಿದ್ವಾಂಸರಿಬ್ಬರು ಸ್ನೇಹಿತರು. ಬುದ್ಧಿ ಹೇಳಿದ: ರಾಜನಾದ ಗೋಪಾಲನಲ್ಲಿಗೆ ಹೋದರೆ ನಮ್ಮ ಬಡತನ ನೀಗೀತು.
ಸುಬುದ್ಧಿ ಹೇಳಿದ: ನೀಡುವುದು ಬಿಡುವುದು ಭಗವಂತನಿಚ್ಛೆ. ಬುದ್ಧಿ ಹೇಳಿದ: ದೇಗಾ ತೋ ಗೋಪಾಲ್ ಕ್ಯಾ ಕರೇಗಾ ಕಪಾಲ್? ಗೋಪಾಲ ರಾಜ ಕೊಟ್ಟರೆ ಭಗವಂತ ಏನು ಮಾಡುತ್ತಾನೆ? ಕೊನೆಗೆ ಇಬ್ಬರೂ ರಾಜನ ಬಳಿ ಹೋಗಿ ತಮ್ಮ ತಮ್ಮ ವಾದ ಮಂಡಿಸಿದರು. ಇಬ್ಬರ ವಾದವನ್ನೂ ಕೇಳಿದ ರಾಜ. ಬುದ್ಧಿಗೆ ಒಂದು ಕುಂಬಳಕಾಯಿಯನ್ನೂ ಸುಬುದ್ಧಿಗೆ ಒಂದು ಸೇರು ಅಕ್ಕಿ ಸ್ವಲ್ಪ ಹಣವನ್ನೂ ಕೊಟ್ಟು ಕಳುಹಿಸಿದ. ಬರುವಾಗ ಬೇಸರಗೊಂಡ ಬುದ್ಧಿ ಆ ಕುಂಬಳಕಾಯಿಯನ್ನು ಸುಬುದ್ಧಿಗೆ ಕೊಟ್ಟು ಅವನ ಅಕ್ಕಿಯನ್ನು ತಾನು ತೆಗೆದುಕೊಂಡ. ಮನೆಯಲ್ಲಿ ಕುಂಬಳಕಾಯಿಯನ್ನು ಕೊರೆಯುವಾಗ ಸುಬುದ್ಧಿಗೆ ಅದರೊಳಗೆ ಗೋಪಾಲ ರಾಜ ಇಟ್ಟಿದ್ದ ಚಿನ್ನ ಸಿಕ್ಕಿತು. ದೇಗಾ ತೋ ಕಪಾಲ್ ಕ್ಯಾ ಕರೇಗಾ ಗೋಪಾಲ್!!!!
  ಮಾನವ ತಂತ್ರಜ್ಞಾನದಿಂದ ಏನೇನೋ ಏನೇನೋ ಸಾಧಿಸಿದರೂ ದೈವಸಂಕಲ್ಪದ ಮುಂದೆ ಅದು ಏನೇನೂ ಏನೇನೂ ಅಲ್ಲ. ಸಾಧಿಸಿದೆ ಎಂಬ ಆ ಗರ್ವ ಸೂರ್ಯನ ಮುಂದೆ ಮಿಂಚು ಹುಳ ಬೀಗಿದಂತೆ. ಸುಖಾ ಸುಮ್ಮನೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಅಷ್ಟೇ. ಆದುದರಿಂದಲೇ ವೇದಾಂತದೇಶಿಕರು ಹೇಳುತ್ತಾರೆ
 ದೇವಂ ಸೇವಿತುಮೇವ ನಿಶ್ಚಿನುಮಹೇ
 ಮುಷ್ಠಿ ಧಾನ್ಯಕ್ಕೆ ಕುಚೇಲನಿಗೆ ಸಂಪತ್ತಿನ ಒಡೆತನವನ್ನೇ ಕೊಟ್ಟ ಆ ಪರಮಾತ್ಮನನ್ನೇ ಸೇವೆಮಾಡುತ್ತೇವೆ ಖಂಡಿತವಾಗಿಯೂ ಅನ್ಯರನ್ನಲ್ಲ. ಹಾಗೆಯೇ ನಮ್ಮ ನಿರ್ಧಾರ.

No comments:

Post a Comment